ಚಾಮರಾಜನಗರ, ಏ.27 : ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿ ಮುಂದುವರೆಯುತ್ತಿರಲು ಹಗಲಿರುಳು ಪರಿಶ್ರಮ ಪಡುತ್ತಿರುವ ವಾರಿಯರ್ಸ್ ಎಂದೇ ಹೇಳಲಾಗುವ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಪುಷ್ಪವೃಷ್ಠಿ ಗೈಯುವ ಮೂಲಕ ಗೌರವ, ಕೃತಜ್ಞತೆ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮ ಚಾಮರಾಜನಗರದಲ್ಲಿ ಇಂದು ನಡೆಯಿತು.
ಚಾಮರಾಜನಗರದ ಹೃದಯ ಭಾಗವೆಂದೇ ಕರೆಯಲ್ಪಡುವ ಜೈ ಭುವನೇಶ್ವರಿ (ಪಚ್ಚಪ್ಪ ವೃತ್ತ) ವೃತ್ತದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೋವಿಡ್-19 ಹರಡದಂತೆ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್, ವೈದ್ಯರು, ಸೇರಿದಂತೆ ಅಗತ್ಯ ಸೇವೆಯ ಸಿಬ್ಬಂದಿಗೆ ಪ್ರಾಥಮಿಕ, ಪ್ರೌಢಶಿಕ್ಷಣ, ಸಕಾಲ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ಕುಮಾರ್ ಅವರು ಜಿಲ್ಲೆಯ ಇತರೆ ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಪುಷ್ಪವೃಷ್ಠಿ ಮುಖೇನ ಧನ್ಯವಾದಗಳನ್ನು ಸಲ್ಲಿಸಿದರು.
ಸಾಮಾನ್ಯರ ಅಸಾಮಾನ್ಯ ಸೇವೆಗಾಗಿ ಜಿಲ್ಲಾಡಳಿತದ ಧನ್ಯವಾದಗಳು ಎಂಬ ಪರಿಕಲ್ಪನೆಯಡಿ ಕೊರೊನಾ ವಾರಿಯರ್ಸ್ ಕೋವಿಡ್ ವಿರುದ್ಧ ಜಿಲ್ಲೆಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಮತ್ತಷ್ಟು ಉತ್ತೇಜನ, ಹುರಿದುಂಬಿಸುವ ಭಾಗವಾಗಿ ಇಂದು ಚಾಮರಾಜನಗರದಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡಿದೆ.
ಕೊರೊನಾ ತಡೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಯ್ದ ಆರೋಗ್ಯ, ಪೊಲೀಸ್, ಪೌರಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಜೈ ಭುವನೇಶ್ವರಿ (ಪಚ್ಚಪ್ಪ ವೃತ್ತ) ವೃತ್ತದ ಸುತ್ತಲೂ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಲ್ಲಿಸಲಾಗಿತ್ತು. ಅಗ್ನಿಶಾಮಕ ದಳದ ವಾಹನದ ಮೇಲೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ಕುಮಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಮೇಲೆ ಪುಷ್ಪ ಸುರಿಯುತ್ತಿದ್ದಂತೆಯೇ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ಕುಮಾರ್ ಅವರು ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವ ಕೊರೊನಾ ಇಂದು ಗಡಿ ಜಿಲ್ಲೆ ಚಾಮರಾಜನಗರವನ್ನು ಬಾಧಿಸಿಲ್ಲ. ಕೇರಳ, ತಮಿಳುನಾಡು ಗಡಿ ಭಾಗಗಳನ್ನು ಹೊಂದಿರುವ ಕರ್ನಾಟಕದ ದಕ್ಷಿಣಭಾಗದ ತುತ್ತತುದಿ ಜಿಲ್ಲೆ ಚಾಮರಾಜನಗರ ಕೊರೊನಾ ಮುಕ್ತವಾಗಿ ಮುಂದುವರೆದಿದೆ. ಇದು ಸಾಧ್ಯವಾಗಿರುವುದು ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ. ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರ ಅವಿರತ ಹೋರಾಟದಿಂದ. ಈ ಎಲ್ಲರ ಅಮೂಲ್ಯ, ಅನುಪಮ ಸೇವೆಯಿಂದ ಜಿಲ್ಲೆ ಸುರಕ್ಷಿತವಾಗಿದೆ. ಹೀಗಾಗಿ ಇವರ ಅನನ್ಯ ಸೇವೆಗೆ ಜಿಲ್ಲಾಡಳಿತದಿಂದ ಪುಷ್ಪವೃಷ್ಠಿಗೈದು ಅಭಿನಂದನೆ ಸಲ್ಲಿಸಿದ್ದೇವೆ ಎಂದರು.
ಇದು ಧನ್ಯಾತಾ ಸಮರ್ಪಣಾ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಆಯೋಜನೆಯಿಂದ ಇಡೀ ಜಿಲ್ಲೆಯ ಜನರಲ್ಲಿ ಧನ್ಯತಾ ಮನೋಭಾ ಮೂಡಲು ಕಾರಣವಾಗಿದೆ. ಇಡೀ ದೇಶದಲ್ಲೆ ಅತೀ ಅಪರೂಪದ ಕಾರ್ಯಕ್ರಮವಾಗಿದೆ. ಇಂದು ನಾವೆಲ್ಲರೂ ಕೊರೊನಾ ವಿರುದ್ದದ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿರುವ ನಮ್ಮೆಲ್ಲ ಆರೋಗ್ಯಯೋಧರಿಗೆ ಇಡೀ ಚಾಮರಾಜನಗರ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಯನ್ನು ಸಮರ್ಪಿಸುತ್ತಿದ್ದೇವೆ ಎಂದು ಸಚಿವರು ನುಡಿದರು.
ಕೊರೊನಾ ವೈರಾಣು ವಿರುದ್ಧ ಹೋರಾಡುವಲ್ಲಿ ಇಡೀ ರಾಜ್ಯದಲ್ಲೇ ನಮ್ಮ ಚಾಮರಾಜನಗರ ಜಿಲ್ಲೆ ವಿಶೇಷವಾಗಿ ಸಾಧನೆಗೈದಿದೆ. ಮೊದಲನೇ ದಿನದಿಂದ ಈ ಘಳಿಗೆಯವರೆಗೆ ಕೊರೊನಾ ಮುಕ್ತ ಜಿಲ್ಲೆಯಾಗುವ ಮೂಲಕ ಹೆಮ್ಮೆಯ ಸ್ಥಾನ ಪಡೆದಿದೆ. ಈ ಕಾರ್ಯದ ಯಶಶ್ಸು ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ. ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರ ಅವಿರತ ಪರಿಶ್ರಮಕ್ಕೆ ಸಲ್ಲಬೇಕು ಎಂದು ಸಚಿವರಾದ ಸುರೇಶ್ಕುಮಾರ್ ತಿಳಿಸಿದರು.
ಗಡಿಭಾಗದಲ್ಲಿ ಜಿಲ್ಲೆಯ ಒಳಬರುವ, ಹೊರಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಅವುಗಳಿಗೆ ಸ್ಯಾನಿಟೈಸ್ ಮಾಡುವ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ, ಜಿಲ್ಲೆಯ ಮೊದಲ ವೈದ್ಯರಾದ ಪೌರಕಾರ್ಮಿಕರು ಸ್ವಚ್ಚತೆ, ನೈರ್ಮಲ್ಯ ಕಾಯಕದ ಮೂಲಕ ಜಿಲ್ಲೆಯ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ವೈದ್ಯರು, ಮನೆ ಮನೆಗೂ ತೆರಳಿ ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಪಂಚಾಯತ್ನ ಅಧಿಕಾರಿಗಳು ಸೇರಿದಂತೆ ಎಲ್ಲರೂ ಒಂದು ತಂಡವಾಗಿ ದುಡಿದಿರುವುದರಿಂದ ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿ ಮುಂದುವರೆದಿದೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮೊದಲು ಚಾಮರಾಜನಗರದಲ್ಲಿ ಸಚಿವರು, ಶಾಸಕರು ಸೈಕಲ್ ಮೂಲಕ ಜೈ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿ ಗಮನ ಸೆಳೆದರು. ಕೋವಿಡ್ ಮಣಿಸಿದ ಜಿಲ್ಲಾ ಜನತೆಗೆ ಧನ್ಯವಾದಗಳು ಎಂಬ ಸಂದೇಶ ಹೊತ್ತ ಬೃಹತ್ ಬಲೂನನ್ನು ಸಚಿವರು ಹಾರಿಬಿಟ್ಟರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್, ಮಹೇಶ್, ಸಿ.ಎಸ್. ನಿರಂಜನ್ಕುಮಾರ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ ಇತರರು ಇದ್ದರು.