ವಿಜಯಪುರ ಎ.24: ನಗರ ಹಾಗೂ ಜಿಲ್ಲಾದ್ಯಂತ ಕೋವಿಡ್-19 ನಿಯಂತ್ರಣಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕೊರೋನಾ ವರಿಯರ್ಸಗಳಾದ ವೈದ್ಯರು, ವೈದ್ಯ ಸಿಬ್ಬಂಧಿಗಳು ಹಾಗೂ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಡಿಗೆ ಮನೆಗಳಿಂದ ಹೊರ ಹೋಗಲು ಒತ್ತಾಯಪಡಿಸುವುದು ಮತ್ತು ಕಿರುಕುಳದಂತಹ ಯಾವುದೇ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೊರೋನಾ ವಾರಿಯರ್ಸಗಳು ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಾರೆ. ತೀವ್ರ ಸಂಕಷ್ಠದ ಪರಿಸ್ಥಿತಿ ಇದಾಗಿದ್ದು ಎಲ್ಲರು ಒಟ್ಟುಗೂಡಿ ಇದರ ವಿರುದ್ಧ ಹೋರಾಡಬೇಕಿದೆ ಅದಾಗಿಯೂ ಕೆಲವು ಕಡೆ ಇಂತಹ ಸೇವೆ ಸಲ್ಲಿಸುತ್ತಿರುವ ವೈದ್ಯರು, ವೈದ್ಯ ಸಿಬ್ಬಂಧಿಗಳು ಹಾಗೂ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಡಿಗೆ ಮನೆಯಿಂದ ಖಾಲಿ ಮಾಡಿಸಲು ಒತ್ತಾಯಿಸುವುದು ಹಾಗೂ ಕಿರುಕುಳ ನಿಡುತ್ತಿರುವುದು ಗಮನಕ್ಕೆ ಬಂದಿದ್ದು ಅಂತವರ ವಿರುದ್ಧ ಕ್ರೀಮಿನಲ್ ಪ್ರಕರಣ, ಐಪಿಸಿ ಸೆಕ್ಷನ್ 188 ಹಾಗೂ ಪ್ರಕೃತಿ ವಿಕೋಪ ಅಧಿನಿಯಮ 2005ರಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಜಿಲ್ಲೆಯಾದ್ಯಂತ ಈ ಎಲ್ಲ ಸಿಬ್ಬಂಧಿಗಳು ಎಎನ್ಎಂ, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದು ಅಂತಹವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಸಿದ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ತಿಳಿಸಿರುವ ಜಿಲ್ಲಾಧಿಕಾರಿಗಳು ಸರ್ಕಾರದ ಹೊಸ ನಿಯಮಾವಳಿಗಳ ಅನ್ವಯ ಎಲ್ಲರು ಸಹಕಾರ ನೀಡಬೇಕು ಇದಕ್ಕೆ ತಪ್ಪಿದಲ್ಲಿ ಅಥವಾ ದೂರು ಬಂದಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಎಚ್ಚರಿಸಿದ್ದಾರೆ.