ವಿಜಯಪುರ: ಕಂಟೆನ್ಮೇಂಟ್ ವಲಯದಲ್ಲಿನ 60 ವರ್ಷ ಪೂರೈಸಿದ ಪ್ರತಿ ವ್ಯಕ್ತಿಯ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ರವಾನೆ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

0
235

ವಿಜಯಪುರ ಮೇ.19: ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಇಂದಿನಿಂದ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಮಾದ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಇಂದಿನಿಂದ ವೈದ್ಯಕೀಯ ಪರೀಕ್ಷಗೆ ಕಳಿಸುವುದರ ಜೊತೆಗೆ ಸಾರಿ ಮತ್ತು ಐಎಲ್‍ಐಗಳಂತಹ ಪ್ರಕರಣಗಳಲ್ಲಿಯೂ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಪಾಸಿಟಿವ್ ಬಂದಲ್ಲಿ ಆಸ್ಪತ್ರೆ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದಿಂದ ಸುಮಾರು 15 ಸಾವಿರ ಜನರು ಜಿಲ್ಲೆಗೆ ಆಗಮಿಸಿದ್ದು, ಪ್ರತಿದಿನ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿರುವವರ 1 ಸಾವಿರದಿಂದ 1500 ವರೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಂಟೇನ್ಮೇಂಟ್ ವಲಯದಿಂದ 65 ವರ್ಷ ವಯೋಮಾನದ ವೃದ್ಧನಿಗೆ ಕೋವಿಡ್-19 ಪಾಸಿಟಿವ್ ಇಂದು ದೃಡಪಟ್ಟಿದ್ದು ರೋಗಿ ಸಂಖ್ಯೆ 1291 ಜಿಲ್ಲಾಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಲೀವರ್ ಕಾಯಿಲೆ, ಹೈಪರ್‍ಟೆನ್ಷನ್ ಸೇರಿದಂತೆ ಇನ್ನಿತರ ತೀವ್ರತರ ಕಾಯಿಲೆಗಳಿಂದ ಬಳಲುತಿದ್ದ ಈ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು. ನಂತರ ಪಾಸಿಟಿವ್ ಎಂದು ದೃಢಪಟ್ಟಿದೆ. ಸಾರಿ ಮತ್ತು ಐಎಲ್‍ಐಗಳಂತಹ ಯಾವುದೇ ಲಕ್ಷಣ ಇದ್ದಿದಿಲ್ಲ. ನಿನ್ನೆ ಕಂಟೇನ್ಮೆಂಟ್ ವಲಯದಲ್ಲಿ ಅವರ ಮನೆಯಲ್ಲಿ ಆ ವ್ಯಕ್ತಿಯ ಉಷ್ಣಾಂಶ ಮತ್ತು ಆಕ್ಸಿಮೀಟರ್ ತಪಾಸಣೆ ವೇಳೆಗೆ ಸಹಜ ಸ್ಥಿತಿ ಇರುವ ಬಗ್ಗೆ ತಿಳಿದು ಬಂದಿತ್ತು, ನಂತರ ತೀವ್ರ ಎದೆ ನೋವಿನಿಂದ ಈ ವ್ಯಕ್ತಿಯು ಖಾಸಗಿ ಆಸ್ಪತ್ರಯೊಂದರಲ್ಲಿ ದಾಖಲಾಗಿದ್ದರು. ಇಸಿಜಿ ಮತ್ತು ಎಕ್ಸರೇ ತಪಾಸಣೆ ಮಾಡಿಸಿಕೊಂಡು ನಿಮೋನಿಯಾ ಇದ್ದಿದ್ದರಿಂದ ಜಿಲ್ಲಾಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ಅದರನ್ವಯ ಈ ಆಸ್ಪತ್ರೆಗೆ ಸಾಗಿಸುವ ಮಧ್ಯ ದಾರಿಯಲ್ಲಿ ಈ ವ್ಯಕ್ತಿ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ಒಟ್ಟು 2803 ಜನರು ಆಗಮಿಸಿದ ಬಗ್ಗೆ ವರದಿಯಾಗಿದೆ. 1705 ಜನರು 28 ದಿನಗಳ ಐಸೊಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 1057 ಜನರು 1 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 3284 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರಲ್ಲಿ 2678 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 546 ಜನರ ವರದಿ ಬರಬೇಕಾಗಿದೆ.

ಅದರಂತೆ ಈವರೆಗೆ 60 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, ಇದರಲ್ಲಿ 4 ಜನರು ಮೃತ ಪಟ್ಟಿದ್ದು, 37 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸಧ್ಯಕ್ಕೆ 20 ಸಕ್ರೀಯ ರೋಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here