ವಿಜಯಪುರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೈಗೊಳ್ಳಬೇಕಾದ ಹೊಸ ಕಾಮಗಾರಿ ಹಾಗೂ ಹಳೆಯ ದುರಸ್ತಿ ಕಾಮಗಾರಿಗಳನ್ನು ಆದ್ಯತೆಯ ಅನುಗುಣವಾಗಿ, ಅನುದಾನ ಲಭ್ಯತೆಯನ್ನು ಪರಿಗಣಿಸಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಪಿ. ಸುನಿಲ್ ಕುಮಾರ್ ಅವರು ತಿಳಿಸಿದರು.
ನಗರದ ಡಾ. ಬಿ .ಆರ್ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಸಂಪ್ ಟ್ಯಾಂಕ್, ಡ್ರೈನೇಜ್ ಕನೆಕ್ಷನ್, ವಾಲಿಬಾಲ್ ಸಿಂಥೆಟಿಕ್ ಮೈದಾನ , ಒಳಾಂಗಣ ಕ್ರೀಡಾಂಗಣ ಕೃಷ್ಣ ಭಾಗ್ಯ ಜಲ ನಿಗಮದಿಂದ ಕೈಗೆತ್ತಿಕೊಂಡ ಕಾಂಕ್ರೀಟ್ ರಸ್ತೆ, ಪುಟ್ ಪಾತ್ , ಹೊರಾಂಗಣ ಜಿಮ್ ಹಾಗೂ ಟೆನ್ನಿಸ್ ಕೋಟ್ ಮೈದಾನ ಒಳಾಂಗಣ ಕ್ರೀಡಾಂಗಣ ಹೊಸ ರಿಪೇರಿ ಗೊಳಿಸುವ ಕುರಿತು ಪರಿಶೀಲನೆ ನಡೆಸಿದರು.
ಈಗಾಗಲೇ ನಿರ್ಮಿಸಲಾಗಿರುವ ಹಾಗೂ ಅಪೂರ್ಣಗೊಂಡ ಕಾಮಗಾರಿಗಳನ್ನು ಮಹಾನಗರ ಪಾಲಿಕೆಯಿಂದ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಕೃಷ್ಣ ಭಾಗ್ಯ ಜಲ ನಿಗಮದಿಂದ ತುರ್ತಾಗಿ ಪೂರ್ಣಗೊಳಿಸಲು ಸೂಚಿಸಿದರು.
ಕ್ರೀಡಾಂಗಣದ ಕಂಪೌಂಡಿಗೆ ಹೊಂದಿಕೊಂಡಿರುವ ಮಹಾನಗರ ಪಾಲಿಕೆಯ ಮೇನ್ ಡ್ರೈನೇಜ್ ಹೂಳಿನಿಂದ ಕೂಡಿದ್ದು ಹೂಳನ್ನು ತೆಗೆಸಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ತಿಳಿಸಿದರು.
ಕ್ರೀಡಾಂಗಣದ ಎಲ್ಲ ತರಹದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರವೇ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ವಿಜಯ್ ಮೆಕ್ಕಳಕಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಜೆ.ಲೋಣಿ, ಬಿ.ಎಂ.ಕೋಕರೆ, ಬಸವರಾಜ ಗೊಳಸಂಗಿ, ವಿವಿಧ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.