ವಿಜಯಪುರ : ಮಾನವೀಯತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮತ್ತು 50ಕಿ.ಮೀ ಓಟವನ್ನು ಈ ವರ್ಷ ಬಾರಿ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ.ಬಿ. ಪಾಟೀಲ ತಿಳಿಸಿದ್ದಾರೆ.
ಸಮಾನತೆಯ ಸಂಕೇತವಾಗಿರುವ ಬಸವಾದಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲ ಜೀವಿಗಳ ಮೇಲೆ ದಯೆ ತೋರುವುದು. ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಹಂದಿನಗೂರು ಗ್ರಾಮದ ಬಿ.ಬಿ.ಪಾಟೀಲ ಅವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ತಂತ್ರಜ್ಞರಾಗಿದ್ದು, ಜೊತೆಗೆ ಬಸವಾದಿ ಶರಣರ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ. 2012 ರಿಂದ ಪ್ರತಿ ವರ್ಷ ಬಸವ ಜಯಂತಿಯಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಓಟದ ಮೂಲಕ ‘ಬಸವ ಜ್ಯೋತಿ’ಯನ್ನು ತರುವ ಕಾರ್ಯ ಮಾಡುತ್ತಿದ್ದು, ಈ ಬಾರಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಇವರೊಂದಿಗೆ ಕೈಜೊಡಿಸಿದ್ದು, ಈಗಾಗಲೇ 100ಕ್ಕೂ ಹೆಚ್ಚು ಜನ ಈ ಯಾತ್ರೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ದಿ.19 ರವಿವಾರ ಸಂ.7ಗಂ. ಬಸವನ ಬಾಗೇವಾಡಿಯಿಂದ ಆರಂಭಗೊಳ್ಳುವ ಈ ಯಾತ್ರೆ ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ ದಿ.20 ಸೋಮವಾರ ಬೆ.7ಗಂ. ಶಿವಗಿರಿ ಮೂಲಕ ಒಟ್ಟು 50 ಕಿ.ಮೀ ಸಂಚರಿಸಿ, ವಿಜಯಪುರ ನಗರದ ಬಸವೇಶ್ವರ ವೃತ್ತಕ್ಕೆ ತಲುಪಿ ಸಂಪನ್ನಗೊಳ್ಳಲಿದೆ.
ಬಸವಜ್ಯೋತಿ ಯಾತ್ರೆಗೆ ನಿರಂತರ ಸಹಾಯ ಮತ್ತು ಸಹಕಾರ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ, ಸಚಿವರಾದ ಸಚಿವ ಶಿವಾನಂದ ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಪುರದ ನಾಗರಿಕರು ಈ ಬಸವ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ. ಮಾಹಿತಿಗಾಗಿ ಶಿವನಗೌಡ ಪಾಟೀಲ-9900536161, ಡಾ.ರಾಜು ಯಲಗೊಂಡ 8095190218 ಅಥವಾ ಡಾ.ಮಹಾಂತೇಶ ಜಾಲಗೇರಿ- 9480152598 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.





