ಟಿಪ್ಪರ್ ಅಡ್ಡಗಟ್ಟಿ ದಾಳಿ – ಕಲ್ಲು, ಗುಂಡಿನ ದಾಳಿಯಿಂದ ಕೊಲೆ
ವಿಜಯಪುರ: ಜಮೀನಿನ ವಿಚಾರದಲ್ಲಿ ಹುಟ್ಟಿಕೊಂಡ ದ್ವೇಷದ ಹಿನ್ನೆಲೆ ವ್ಯಕ್ತಿಯನ್ನು ಕಾರಿನಲ್ಲೇ ಕೊಲೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ ೧೪ ರಂದು ಮಧ್ಯಾಹ್ನ ಸುಮಾರು ೩:೦೦ ಗಂಟೆಗೆ ಅಲಿಯಾಬಾದ್ ಚವ್ಹಾಣ ದೊಡ್ಡಿ ನಿವಾಸಿಯಾದ ಅಬುಸಾ ಸೋಪಾನ ಕೊಡ್ಲೆಕರ ಸೇರಿದಂತೆ ಇನ್ನೂ ಕೆಲವರು ಸೇರಿಕೊಂಡು, ಜಮೀನು ವಿವಾದದ ಹಿನ್ನೆಲೆಯಲ್ಲಿ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.
ಪರ್ಯಾದಿದಾರರ ತಮ್ಮ ರಾಜು ಬಾಪು ಖರೆ (೪೨), ಅಲಿಯಾಬಾದ್ ಗೋಲ್ಡನ್ ದೊಡ್ಡಿ ನಿವಾಸಿಯಾಗಿದ್ದು, ಅವರು ತಮ್ಮ ಥಾರ್ ಕಾರು (ಕೆಎ-೨೮ ಎಮ್ಎ-೫೭೮೫)ದಲ್ಲಿ ವಿಜಯಪುರದತ್ತ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಶ್ರೀ ಧರಿದೇವರ ಗೋಡೌನ್ ಸಮೀಪಕ್ಕೆ ಬಂದಾಗ, ಎದುರಿನಿಂದ ಬಂದ ಟಿಪ್ಪರ್ (ಕೆಎ-೧೩-೮೭೪೮) ಅನ್ನು ಜೋರಾಗಿ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಹೊಡೆದು ಅಡ್ಡಗಟ್ಟಲಾಗಿದೆ.
ನಂತರ ಆರೋಪಿಗಳು ಕಾರಿನಲ್ಲೇ ಕಲ್ಲಿನಿಂದ ಹೊಡೆದು ಹಾಗೂ ಪಿಸ್ತೂಲ್ನಿಂದ ಗುಂಡು ಹಾರಿಸಿ ರಾಜು ಖರೆ ಅವರಿಗೆ ಗಂಭೀರ ಗಾಯಗಳಾಗುವಂತೆ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸುಜೀರ ಬಾಪು ಖರೆ ಅವರು ನೀಡಿದ ದೂರಿನ ಮೇರೆಗೆ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಘಟನೆ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.





