ವಿಜಯಪುರ ಜು 19 : ದಿ. ಮಾಪಮ್ಮ ಶಂಭುಲಿಂಗ ಹೊಸಮನಿ ಅವರ ಸ್ಮರಣಾರ್ಥ ನೀಡಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುಸ್ತಕ ಬಹುಮಾನಕ್ಕೆ ಸೋಮಲಿಂಗ ಗೆಣ್ಣೂರ ಅವರ ʼಅಂಬೇಡ್ಕರ್ ಮಾರ್ಗ’ ಕೃತಿ ಆಯ್ಕೆಯಾಗಿರುತ್ತದೆ. ಕೃತಿಯ ಲೇಖಕರಿಗೆ ಐದು ಸಾವಿರ ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು ಎಂದು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸುಮಾರು ನಲವತ್ತು ವರ್ಷಗಳಿಂದ ಆಚರಿಸುತ್ತ ಬರುತ್ತಿದೆ. ಅದರಂಗವಾಗಿ ಕಲ್ಯಾಣ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಪ್ರಕಟಗೊಂಡ ಕೃತಿಗಳಿಗೆ ಬಹುಮಾನ ಕೊಡುತ್ತ ಬರಲಾಗುತ್ತಿದೆ.
ಪ್ರಸ್ತುತ ಸಾಲಿನಿಂದ ಕನ್ನಡದಲ್ಲಿ ಬರೆದು ಪ್ರಕಟಿಸಿದ ಡಾ. ಬಿ.ಆರ್. ಅಂಬೇಡ್ಕರ್ ಪುಸ್ತಕಕ್ಕೆ ರಾಜ್ಯ ಮಟ್ಟದ ಪುಸ್ತಕ ಬಹುಮಾನವನ್ನು ಕೊಡುವಂತೆ ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಹೊಸಮನಿಯವರು ತಮ್ಮ ತಾಯಿವರ ಸ್ಮರಣಾರ್ಥ ಒಂದು ಲಕ್ಷ ರೂಪಾಯಿಯನ್ನು ಇಡುಗಂಟಿನ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಪಾವತಿ ಮಾಡಿದ್ದರು.
2020-21ರ ಸಾಲಿನಲ್ಲಿ ಪ್ರಕಟಗೊಂಡ ಒಟ್ಟು ಹದಿಮೂರು ಪುಸ್ತಕಗಳು ಬಹುಮಾನಕ್ಕಾಗಿ ಸಲ್ಲಿಕೆಯಾಗಿದ್ದವು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.