ವಿಜಯಪುರ ಮಾ 09: ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಸಮಾಜದಲ್ಲಿ ನಮ್ಮ ಮನೆ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಿದರೆ ಸಾಲದು. ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಹಾಗೂ ಪಾಲಕರು ಗಂಡು ಮಕ್ಕಳಿಗೆ ನೀಡುವಷ್ಟೇ ಅವಕಾಶವನ್ನು ಹೆಣ್ಣು ಮಕ್ಕಳಿಗೂ ನೀಡಬೇಕು. ಆಗ ಮಾತ್ರ ಈ ದಿನಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಶ್ರೀಮತಿ ಚೈತನ್ಯ ಶೆಟ್ಟಿ ಅವರು ಹೇಳಿದರು.
ನಗರದ ರೂಡ್ಸೆಟ್ ಸಂಸ್ಥೆಯಲ್ಲಿ ಮಹಾನಗರ ಪಾಲಿಕೆಯ ದೀನ್ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಬೇಕಿರುವುದು ಕೇವಲ ತೋರಿಕೆಯ ಗೌರವವಲ್ಲ. ಹೆಣ್ಣುಮಕ್ಕಳ ರಕ್ಷಣೆ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಹೆಣ್ಣು ಭ್ರೂಣ ಹತ್ಯೆ ತಡೆಯಂತಹ ಕ್ರಮಗಳ ಮೂಲಕ ಮಾತ್ರ ಅವಳಿಗೆ ಪ್ರಬುದ್ಧ ಸಮಾಜದಲ್ಲಿ ಗೌರವ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ಮಲಾ ಸುರಪುರ, ಷಗುಪ್ತಾ ಮಲ್ಲಾಡಕರ, ಶ್ರೀ ಆರ್.ಎಮ್ ಕೊಡಗೆ, ಶ್ರೀ ರಾಜೇಂದ್ರ ಜೈನಾಪೂರ, ಸುಲೋಚನಾ ಪವಾರ, ಪಾಲಿಕೆ ಸಿಬ್ಬಂದಿಗಳಾದ ಶ್ರೀಮತಿ ಗೀತಾ ನಿಂಬಾಳ್ಕರ, ಸಮುದಾಯ ಸಂಘಟನಾಧಿಕಾರಿ ಶ್ರೀಮತಿ ಭಾರತಿ ಕೌಲಗಿ, ಶ್ರೀಮತಿ ಶಿಲ್ಪಾ ಸಾಗರ, ಶ್ರೀಮತಿ ಎನ್.ಆರ್ ಕಗ್ಗೋಡ, ಸ್ವ-ಸಹಾಯ ಸಂಘ ಮತ್ತು ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು. ಡೇ-ನಲ್ಮ್ ಅಭಿಯಾನ ವ್ಯವಸ್ಥಾಪಕರಾದ ಶ್ರೀಮತಿ ಸುನಂದಾ ಬಾಲಪ್ಪನವರ ನಿರೂಪಿಸಿದರು.