ವಿಜಯಪುರ: ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ಘಟಕವು ಕೊತಬಾಳ ಗ್ರಾಮ ಪಂಚಾಯತಿ ಪಿಡಿಒ ಮುಕ್ತಂಹುಸೇನ್ ಕರಡಿಗುಡ್ಡ ಅವರ ಆತ್ಮಹತ್ಯೆ PDO Suicide ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಎಸ್.ಆರ್. ಕಟ್ಟಿ ಮಾತನಾಡಿ, ಅತಿಯಾದ ಕೆಲಸದ ಒತ್ತಡ, ಲೋಕಾಯುಕ್ತ ತನಿಖೆ ಹಾಗೂ ಹಲವು ತಿಂಗಳುಗಳಿಂದ ವೇತನ ಸಿಗದ ಹಿನ್ನೆಲೆ ಮುಕ್ತಂಹುಸೇನ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ಈ ಘಟನೆ ರಾಜ್ಯದ ಪಿಡಿಒ ಸಮುದಾಯಕ್ಕೆ ಆಘಾತ ತಂದಿದೆ ಎಂದರು. ಸಂಘವು ಮೃತರ ಕುಟುಂಬಕ್ಕೆ ಬಾಕಿ ವೇತನ ಬಿಡುಗಡೆ, ಆರ್ಥಿಕ ನೆರವು ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿತು. ಜೊತೆಗೆ ಪಿಡಿಒಗಳ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಬೇಕು, PDO Suicide ಅನಗತ್ಯ ಅಮಾನತು ಕ್ರಮ ನಿಲ್ಲಿಸಬೇಕು ಹಾಗೂ ಮೀನಾಕ್ಷಿ ಸುಂದರಂ ಸಮಿತಿ ವರದಿ ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಭೀಮರಾಯ ಸಾಗರ್, ನಿಂಗಪ್ಪ ಜೆಷ್ಟಗೊಂಡ, ಮಲ್ಲಿಕಾರ್ಜುನ್ ಕುಠೋಜಿ, ಶರಣಬಸು ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






