ಬಾಗಲಕೋಟೆ: Fireworks safety measures ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕ್ಷಿಗಳನ್ನು ಸಂಗ್ರಹಿಸುವ ಮತ್ತು ಮಾರಾಟ ಮಾಡುವ ವೇಳೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.
ಇದನ್ನೂ ಓದಿ: Bagalkote News | ಸಹಕಾರ ರತ್ನ ಪ್ರಶಸ್ತಿಗೆ ಅರ್ಜಿ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಜರುಗಿದ ದೀಪಾವಳಿ ಹಬ್ಬದ ನಿಮಿತ್ಯ ಜಿಲ್ಲೆಯಾದ್ಯಂತ ಮುಂಜಾಗ್ರತ ಕ್ರಮವಾಗಿ ಪಟಾಕಿ ಸಂಗ್ರಹಣೆ ಹಾಗೂ ಮಾರಾಟ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭವಿಷ್ಯದಲ್ಲಿ ಸಂಭವಿಸಬಹುದಾದ ಅವಗಡಗಳನ್ನು ತಡೆಯುವ ಉದ್ದೇಶ ಹಾಗೂ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಸರಕಾರದ ನಿರ್ದೇಶನದಂತೆ ಜಿಲ್ಲಾ, ಉಪ ವಿಭಾಗ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪಟಾಕಿ ಸನ್ನದ್ದುದಾರರ ಮಾರಾಟ ಹಾಗೂ ಸಂಗ್ರಹಣೆ ಮಾಡಿರುವ ಅಂಗಡಿಗಳನ್ನು ಪರಿಶೀಲಿಸುವ ಕಾರ್ಯ ಕೈಗೊಳ್ಳಲಿದ್ದಾರೆ. ಸನ್ನದ್ದುದಾರರು ಜಿಲ್ಲಾಡಳಿತಕ್ಕೆ ಅಗತ್ಯವಾದ ಸಹಕಾರ ನೀಡಬೇಕು.
Fireworks safety measures ಮಾರಾಟಗಾರರು ಸುರಕ್ಷತಾ ದೃಷ್ಠಿಯಿಂದ ಎರಡು ಪಟ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರಬೇಕು. ಎಲ್ಲಾ ಪಟಾಕಿ ಮಾರಾಟಗಾರರು ಹಾಗೂ ದಾಸ್ತಾನುಗಾರರು ಅಧಿಕೃತ ಪರವಾನಿಗೆ ಹೊಂದಿರಲೇಬೇಕು. ಜನವಸತಿ ರಹಿತ ಸ್ಥಳದಲ್ಲಿ ಪಟಾಕಿ ಮಳಿಗೆ ಹಾಕುವ ವ್ಯವಸ್ಥೆಯಾಗಬೇಕು. ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿ ಹೊರತುಪಡಿಸಿ ಇನ್ಯಾವುದೇ ಪಟಾಕಿ ಮಾರಾಟ ಮಾಡುವಂತಿರುವದಿಲ್ಲ. ಪಟಾಕಿ ಮಳಿಗೆಯ ಮುಂಭಾಗದಲಿ ಧೂಮಪಾನ ನಿಷೇಧಿಸಿದೆ ಎಂಬ ಫಲಕ ಹಾಗೂ ಅಗ್ನಿಶಾಮಕ ಠಾಣೆ ಮತ್ತು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ಸೂಚನೆ ಫಲಕಗಳನ್ನು ಹಾಕಬೇಕು ಎಂದರು.
ನಿಷೇಧಿತ ಪಟಾಕಿಗಳ ದಾಸ್ತಾನು ಮಾಡಿದಲ್ಲಿ ಅಂತಹ ಮಳಿಗೆಯನ್ನು ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ಹೂಡಲಾಗುವುದು. ಪಟಾಕಿಗಳನ್ನು ಹಗಲಿನ ವೇಳೆ ಮಾತ್ರ ಮಾರಾಟ ಮಾಡಬೇಕು ಮತ್ತು ರಾತ್ರಿ ವೇಳೆಯಲ್ಲಿ ಮಳಿಗೆಯಲ್ಲಿ ಯಾರೂ ಮಲಗಲು ಅವಕಾಶ ನೀಡತಕ್ಕದ್ದಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿ: Bagalkote news | ಕನ್ನಡ ರಾಜ್ಯೋತ್ಸವ : ಪ್ರಬಂಧ, ಸಮೂಹ ಗೀತ ಗಾಯನ ಸ್ಪರ್ಧೆ
ಶುಭ ದೀಪಾವಳಿ ಆಚರಿಸಬೇಕೆಂದಲ್ಲಿ ಜನರಲ್ಲಿ ಪಟಾಕ್ಷಿ ಸಿಡಿಸುವಾಗ ವಹಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಕೂಡ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷದಕಿಂತ ಹೆಚ್ಚಿನ ಮಟ್ಟದ ಸುರಕ್ಷತಾ ಕ್ರಮಗಳ ಕುರಿತ ಅರಿವು ಮೂಡಿಸುವ ಕಾರ್ಯ ಮಾಡಿರಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ , ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ಜಿಲ್ಲೆಯ ಎಲ್ಲ ತಹಶೀಲ್ದಾರರು ಉಪಸ್ಥಿತರಿದ್ದರು.






