ವಿಜಯಪುರ: ಶಾಂತಿಧೂತ ಹಜರತ್ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸ್ವಾಮೀಜಿ ನರಸಿಂಗನಾಂದ ಅವರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಎ.ಐ.ಎಂ.ಐ.ಎಂ. ಪಕ್ಷದ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಲಿಖಿತ ಮನವಿ ಸಲ್ಲಿಸಲಾಯಿತು. ಪ್ರವಾದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಸ್ವಾಮೀಜಿ ನರಸಿಂಗನಾಂದ ಅವರ ವಿರುದ್ಧ ಪಕ್ಷದ ಪದಾಧಿಕಾರಿಗಳು ಘೋಷಣೆ ಕೂಗಿ, ಅವರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: Bengaluru | ಜಮ್ಮು-ಕಾಶ್ಮೀರ ಚುನಾವಣಾ ಫಲಿತಾಂಶ: ಬಿಜೆಪಿ ಗೆಲುವಿಗೆ ಕಪಾಳ ಮೋಕ್ಷ, ಸಚಿವ ಪ್ರಿಯಾಂಕ್ ಖರ್ಗೆ ಉಲ್ಲೇಖ
ನೇತೃತ್ವ ವಹಿಸಿದ್ದ ಎ.ಐ.ಎಂ.ಐ.ಎಂ ಪಕ್ಷದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪೂರ ಮಾತನಾಡಿ, ಜಗತ್ತಿಗೆ ಮಾನವೀಯತೆ, ಸಹೋದರತೆ, ಅನಾಥರ ರಕ್ಷಣೆ ಹಾಗೂ ಬಡವರ ಕಲ್ಯಾಣ ಹೀಗೆ ಉದಾತ್ತ ತತ್ವಗಳ ಪಥ ತೋರಿದ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ ಅವರ ಬಗ್ಗೆ ಇಡೀ ಜಗತ್ತಿನಲ್ಲಿಯೇ ಗೌರವ ಭಾವನೆ ಇದೆ. ಮನುಕುಲದ ಉದ್ದಾರಕ್ಕಾಗಿ ಶಾಂತಿಧೂತರಾಗಿ ಬಂದ ಪ್ರವಾದಿ ಮೊಹಮ್ಮದ್ ಅವರ ಜೀವನ ಸಂದೇಶಗಳು ಎಲ್ಲರಿಗೂ ಮಾದರಿ.
ಮೊಹಮ್ಮದ್ ಪೈಗಂಬರ್, ಒಬ್ಬ ಕಾರ್ಮಿಕನ ಬೆವರು ಆರುವ ಮುನ್ನವೇ ಆತನ ವೇತನ ಕೊಡಿ ಎಂದು ಸಾರಿದ ಪ್ರವಾದಿ ಮೊಹ್ಮದ್ ಪೈಗಂಬರ್ ಮಾನವೀಯತೆಯ ಪ್ರತೀಕ. ಎಲ್ಲ ಧರ್ಮೀಯರು ಸಹ ಪ್ರವಾದಿ ಅವರ ಚಿಂತನೆಗಳನ್ನು ಬಣ್ಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿ ಎಂದು ಹೇಳಿಕೊಂಡ ನರಸಿಂಗ್ ಆನಂದ ಪ್ರವಾದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Vijayapura News | ಥಾಂಗ – ತಾ ಜೂನಿಯರ ಕ್ರೀಡಾಕೂಟ ೨೦೨೪
ಹಿಂದೂ ಧರ್ಮದಲ್ಲಿ ಕಾವಿಗೆ ಪವಿತ್ರ ಸ್ಥಾನವಿದೆ, ಅನೇಕ ತ್ಯಾಗ, ಬಲಿದಾನದ ನಂತರ ಕಾವಿ ಧರಿಸುವ ಅರ್ಹತೆ ಬರುತ್ತದೆ, ಆದರೆ ಈ ವ್ಯಕ್ತಿ ಹಿಂದೂ ಧರ್ಮಕ್ಕೂ ಸಹ ಅಪಮಾನ ಮಾಡಿದ್ದಾನೆ, ಯಾವ ಯೋಗ್ಯತೆಯೂ ಇಲ್ಲದ ಇತ ಪ್ರವಾದಿ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾನೆ. ಈಗಾಗಲೇ ಇತನನ್ನು ಬಂಧಿಸಲಾಗಿದೆ, ಇತನ ಹೇಳಿಕೆಯಿಂದ ಸಮಸ್ತ ಮುಸ್ಲಿಂ ಬಾಂಧವರಿಗೆ ನೋವುಂಟಾಗಿದೆ.
ಹೀಗಾಗಿ ಆತನನ್ನು ಬಂಧಿಸಿದರೆ ಸಾಲದು ತಕ್ಷಣ ಆತನನ್ನು ಗಲ್ಲಿಗೇರಿಸಬೇಕು, ಮಹಾತ್ಮರ ಬಗ್ಗೆ ಮಾತನಾಡುವ ಮುನ್ನ ಎಚ್ಚರ ವಹಿಸಬೇಕು ಎಂಬ ಸಂದೇಶ ಈಗ ರವಾನೆಯಾಗಬೇಕಿದೆ. ಮಾನ್ಯ ಘನತೆವೆತ್ತ ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅಲ್ಲಾಭಕ್ಷ ಕೋರಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಸಮೀರ ಪೀರಜಾದೆ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಝಿಯಾ ಪಠಾಣ, ಇರ್ಫಾನ್ ಕಡ್ಲಿಮಟ್ಟಿ, ಮುಬಾರಕ, ದಾದಾಪೀರ, ಅಬ್ದುಲ್ ರಜಾಕ್ ಮೊದಲಾದವರು ಪಾಲ್ಗೊಂಡಿದ್ದರು.