ಮಂಗಳೂರು: ದೇವಸ್ಥಾನ, ದೈವಸ್ಥಾನ, ಮಸೀದಿ ಸೇರಿದಂತೆ ಸುಮಾರು 18 ಕಡೆಗಳಲ್ಲಿ ಕಾಣಿಕೆ ಡಬ್ಬಗಳಲ್ಲಿ ಕಾಂಡೋಮ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ 62 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ಮಂಗಳೂರು ಹೊರವಲಯದ ಕೋಟೆಕಾರು ಕೊಂಡಾಣದಲ್ಲಿ ವಾಸಿಸುತ್ತಿದ್ದು, ಹುಬ್ಬಳ್ಳಿ ಮೂಲದ ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ದೇವದಾಸ್ ದೇಸಾಯಿ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜನರು ತಪ್ಪಾಗಿ ಆರಾಧನೆ ಮಾಡುತ್ತಾ ದೇವರ ಅವಕೃಪೆಗೆ ಪಾತ್ರರಾಗುತ್ತಿದ್ದಾರೆ. ನೀವು ಆರಾಧಿಸುವ ದೇವರಿಗೆ ಕಾಣಿಕೆ ಡಬ್ಬಿಯನ್ನೇ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡುವುದಕ್ಕಾಗಿ ಆರೋಪಿಯು ಧಾರ್ಮಿಕ ಕೇಂದ್ರಗಳನ್ನು ಅಪವಿತ್ರ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿ ದೇವದಾಸ್ ದೇಸಾಯಿ, ತಾನು ಮಾಡಿದ ಯಾವುದೆ ಕೃತ್ಯದ ಬಗ್ಗೆ ಪಶ್ಚಾತಾಪ ಇಲ್ಲ ಎಂದು ಹೇಳಿಕೊಂಡಿದ್ದಾನೆ. “ಹದಿನೈದು ವರ್ಷಗಳಿಂದ ಬೈಬಲನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ಭೂಮಿಗೆ ಅಂತ್ಯ ಬರುವ ಮೊದಲು ಏಸುಕ್ರಿಸ್ತನ ಹೆಸರಿನಲ್ಲಿ ರಕ್ಷಣೆ ಹೊಂದಿ ಎಂದು ಅದು ಹೇಳುತ್ತದೆ. ಆದರೆ ಜನರು ಇದನ್ನು ಪಾಲಿಸುತ್ತಿಲ್ಲ, ಹಾಗಾಗಿ ಅಪವಿತ್ರ ಜಾಗಗಳಿಗೆ ಅಪವಿತ್ರ ವಸ್ತುಗಳನ್ನು ಹಾಕುತ್ತಿದ್ದೆ” ಎಂದು ಹೇಳಿದ್ದಾನೆ.