ಹುಬ್ಬಳ್ಳಿ ಏ.24: ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಆದರೂ ಕೆಲವೊಮ್ಮೆ ವೈರಸ್ ನಮಗೆ ಅರಿವಿಲ್ಲದೆಯೇ ಹರಡುವ ಸಾಧ್ಯ ಇರುತ್ತದೆ.
ಕೋವೀಡ್ -19 ರೋಗಿಗಳನ್ನು ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕ. ಇದನ್ನು ಮನಗಂಡ ಕೆ.ಎಲ್.ಇ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದೆ.
ಈಗ ಇರುವ ಹ್ಯಾಂಡ್ ಸ್ಯಾನಿಟೈಜರ ಬಳಸಲು ನಾವು ಕೈಯಿಂದ ಅವುಗಳನ್ನು ಮಟ್ಟಬೇಕು. ಇನ್ನೂ ಕೋವಿಡ್- 19 ಆಸ್ಪತ್ರೆಗಳಲ್ಲಿ ಪಿ.ಪಿ.ಕಿಟ್ ಧರಿಸಿರುವ ವೈದ್ಯರು ಹಾಗೂ ನರ್ಸ್ ಗಳಿಗೆ ಈ ರೀತಿಯ ಸ್ಯಾನಿಟೈಜರ ಬಳಸುವುದು ಕಷ್ಟವಾಗುತ್ತದೆ. ಇದನ್ನು ಅರಿತ ವಿದ್ಯಾರ್ಥಿಗಳಾದ ಕಾರ್ತಿಕ್.ವಿ.ಆರ್. ಅಭಿಲಾಷ್ .ಜಿ, ವಿನಾಯಕ, ಪ್ರವೀಣ, ಸಂತೋಷ್,ಅಭಿಲಾಷ್.ಕೆ ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ ನಿರ್ಮಿಸಿದ್ದಾರೆ. ಕೆ.ಎಲ್.ಇ. ಮೆಕಾನಿಕಲ್ ವಿಭಾಗ ಪ್ರಾಧ್ಯಾಪಕ ರವಿ ಗುಟ್ಟಾಲ್ ಹಾಗೂ ಕಿಮ್ಸ್ ವೈದ್ಯ ಎಸ್.ವಿ.ಮುಲ್ಕಿಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಈ ಪ್ರಯತ್ನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಿದ್ಯಾರ್ಥಿಗಳು ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿಯವರಿಗೆ ಹಸ್ತಾಂತರಿಸಿದರು. ಆಸ್ಪತ್ರೆ, ಬೃಹತ್ ಕೈಗಾರಿಕೆಗಳು, ಸರ್ಕಾರಿ ಕಚೇರಿ, ಹೋಟೆಲ್, ಲಾಡ್ಜ್, ಸಮುದಾಯ ಭವನ ಇತರೆಡೆಗಳಲ್ಲೂ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ಬಳಕೆಗೆ ಯೋಗ್ಯವಾಗಿದೆ.