ಧಾರವಾಡ: ಮುಸ್ಲಿಂ ಸಮುದಾಯದವರ ಅಂಗಡಿಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಂದು ಕಲ್ಲಂಗಡಿ ಹಣ್ಣುಗಳನ್ನೆಲ್ಲಾ ಧ್ವಂಸ ಮಾಡಿ ಚೆಲ್ಲಿದ್ದರಿಂದ ಧಾರವಾಡದ ನುಗ್ಗೆಕೇರಿಯ ಹನುಮಾನ್ ದೇವಸ್ಥಾನದ ಬಳಿ ನಿನ್ನೆ ಸಾಯಂಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಈ ಸುದ್ದಿ, ಫೋಟೋ-ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ-ವಿಡಿಯೋಗಳು ಸಾಕಷ್ಟು ಹರಿದಾಡುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಎತ್ತಿನ ಗಾಡಿಗಳಿಂದ ಹಣ್ಣು-ತರಕಾರಿಗಳನ್ನು ಎಳೆದಾಡಿ ತೆಗೆದು ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿಸಾಕಲಾಗಿದೆ. ಸಾಕಷ್ಟು ಹಣ್ಣು-ತರಕಾರಿಗಳು ಹಾನಿಯಾಗಿವೆ.
ಎರಡೂ ಸಮುದಾಯಗಳ ನಡುವೆ ಸಾಕಷ್ಟು ವಾಗ್ವಾದಗಳು ನಡೆದು ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದರು. ಈಗ ಪರಿಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು ಪೊಲೀಸರು ಸ್ಥಳದಲ್ಲಿ ಕಾವಲು ಕಾಯುತ್ತಿದ್ದಾರೆ.
ಮುಸಲ್ಮಾನ ಅಂಗಡಿಗಳ ಹಣ್ಣುಗಳನ್ನು ಧ್ವಂಸ ಮಾಡಿದ ಬಲಪಂಥೀಯ ಹಿಂದೂಪರ ಸಂಘಟನೆ ಸದಸ್ಯರ ವಿರುದ್ಧ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.