ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಗೊಂದಲಗಳ ಗೂಡಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ಭಯವಾಗುತ್ತಿದೆ. ರಾಜ್ಯದಲ್ಲಿ ಬುಗಿಲ್ಲೆದ್ದಿರುವ ವಿವಾದದಕ್ಕೆ ಸರಕಾರ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಮುಸ್ಲಿಮ್ ವಿದ್ಯಾರ್ಥಿನಿಯರು ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ತರಗತಿಯಲ್ಲಿ ಮತ್ತು ತರಗತಿಯ ಸಮಯದಲ್ಲಿ ಮಾತ್ರ ಹಿಜಾಬ್ ಧರಿಸುವಂತಿಲ್ಲ.
ಅವರು ಯಾವುದೇ ಧರ್ಮದವರಾಗಿದ್ದರೂ ಎಲ್ಲರಿಗೂ ಅದು ಅನ್ವಯಿಸುತ್ತದೆ” ಎಂದು ರಾಜ್ಯ ಸರ್ಕಾರದ ನಿಲುವನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಬಲವಾಗಿ ಸಮರ್ಥಿಸಿದರು.
ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶವನ್ನು ಆಕ್ಷೇಪಿಸಿ ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಪೀಠವು ವಿಚಾರಣೆ ನಡೆಸಿತು.
“ದೇಶದಲ್ಲಿ ಹಿಜಾಬ್ ಗೆ ನಿಷೇಧವಿಲ್ಲ. 19(1)(ಎ) ವಿಧಿ ಅಡಿಯಲ್ಲಿ ಹಿಜಾಬ್ ಧರಿಸುವ ಹಕ್ಕು 19(2) ಅಡಿಯಲ್ಲಿ ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ನಮ್ಮ ವಿಚಾರದಲ್ಲಿ ನಿಯಮ 11 ಸಾಂಸ್ಥಿಕ ಶಿಸ್ತಿಗೆ ಸಮಂಜಸವಾದ ನಿರ್ಬಂಧವನ್ನು ಹೊಂದಿದೆ” ಎಂದರು.
ಹಿಜಾಬ್ ಧರಿಸುವುದನ್ನು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸುವುದು ಮುಸ್ಲಿಂ ಮಹಿಳೆಯರನ್ನು ನಿರ್ದಿಷ್ಟ ಉಡುಪನ್ನು ಧರಿಸಲು ಒತ್ತಾಯಿಸಿದಂತಾಗುತ್ತದೆ. ಒಂದೊಮ್ಮೆ ನ್ಯಾಯಾಲಯದ ಆದೇಶದ ಮೂಲಕ ಹಿಜಾಬ್ ಧರಿಸುವುದಕ್ಕೆ ಧಾರ್ಮಿಕ ಮಂಜೂರಾತಿಯಾದರೆ ಮುಸ್ಲಿಮ್ ಮಹಿಳೆ ಆ ನಿರ್ದಿಷ್ಟ ಉಡುಪನ್ನು ಧರಿಸುವುದು ಕಡ್ಡಾಯವಾಗುತ್ತದೆ. ಇಷ್ಟವಿಲ್ಲದವರೂ ಹಿಜಾಬ್ ಹಾಕಬೇಕಾಗುತ್ತದೆ ಎಂದರು.