ವಿಜಯಪುರ ನ.06: ಹಣಕ್ಕಾಗಿ ತಂದೆಯನ್ನು ಕೊಲೆ ಮಾಡಿರುವ ಸಿಂದಗಿ ಪೊಲೀಸರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬೆಂಗಳೂರು ಯಲಹಂಕ ಠಾಣೆಯ ಪೇದೆ ಬಸವರಾಜ ಪಾಟೀಲ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ವಿಜಯಪುರ ಎಸ್ಪಿಗೆ ವಿಡಿಯೊ ಮೂಲಕ ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿದ್ದೇನೆ. ನನ್ನ ಕುಟುಂಬದ ವಿರುದ್ಧ ಸಿಂದಗಿ ಪೊಲೀಸರು ದೌರ್ಜನ್ಯ, ಅಟ್ಟಹಾಸ, ರಾಕ್ಷಸ ಕೃತ್ಯ ಎಸಗಿದ್ದಾರೆ. ಅವರು ಹೇಳಿದ ಹಾಗೆ ಕೇಳಲಿಲ್ಲ ಎಂದು ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಫೇಸ್ ಬುಕ್ಲೈವ್ ನಲ್ಲಿ ಪೇದೆ ಬಸವರಾಜ ಪಾಟೀಲ ಆರೋಪಿಸಿದ್ದಾರೆ.
ದೌರ್ಜನ್ಯ ಎಸಗಿದ ಸಿಂದಗಿಯ 8 ಜನ ಪೊಲೀಸರ ಹೆಸರನ್ನು ನನ್ನ ತಂದೆ ಸಾಯುವ ಮುನ್ನ ಡೆತ್ ನೋಟ್ ನಲ್ಲಿ ಬರೆದಿದ್ದು, ಈ ಕುರಿತು ಮಹತ್ವದ ದಾಖಲೆಗಳಿದ್ದರೂ ವಿಜಯಪುರ ಎಸ್ಪಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದವರು ದೂರಿದ್ದಾರೆ.
ಪೊಲೀಸ್ ಇಲಾಖೆ ನೌಕರನಾಗಿದ್ದರೂ, ನನ್ನ ತಂದೆಯ ಜೀವ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಸಾರ್ವಜನಿಕರನ್ನು ಪೊಲೀಸರು ಹೇಗೆ ರಕ್ಷಿಸುತ್ತಾರೆ ಎಂದವರು ಪ್ರಶ್ನಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತನ್ಮೂಲಕ ನಮ್ಮ ತಂದೆಯ ಸಾವಿಗೆ ನ್ಯಾಯ ಕಲ್ಪಿಸಬೇಕೆಂದು ಫೇಸ್ ಬುಕ್ ವಿಡಿಯೋ ಲೈವ್ನಲ್ಲಿ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ನನಗೆ ಹಾಗೂ ನನ್ನ ಸಹೋದರನಿಗೆ ಸಿಂದಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ. ನಮ್ಮ ತಂದೆಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಫೇಸ್ಬುಕ್ ಲೈವ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.