ವಿಜಯಪುರ ನ.06: ಭೀಮಾ ತೀರದ ಮಹಾದೇವ ಭೈರಗೊಂಡ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಹಾಗೂ ಮಾಹಿತಿ ನೀಡಿದ ಆರೋಪಿಯನ್ನು ಬಂಧಿಸಿದ್ದಾಗಿ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ತಿಳಿಸಿದ್ದಾರೆ.
ಭೈರಗೊಂಡ ಚಲನವಲನದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತಿದ್ದ ವಿಜಯ ತಾಳಿಕೋಟೆ, ಹಾಗೂ ಟಿಪ್ಪರ್ ಚಾಲಕ ನಾಗಪ್ಪ ಪೀರಗೊಂಡ ಬಂಧಿತ ಆರೋಪಿಗಳು.
ಗ್ಯಾಂಗ್ ಕಟ್ಟಬೇಕೆಂಬ ಮೋಹದಿಂದಾಗಿ ಮಡಿವಾಳ ಹಿರೇಮಠ ಎನ್ನುವ ವ್ಯಕ್ತಿ ಈ ಪ್ರಕರಣದ ಕೇಂದ್ರ ಬಿಂದುವಾಗಿದ್ದು, ಆತನೂ ಸಹ ಈ ಕತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಆತ ತಲೆಮರೆಸಿಕೊಂಡಿದ್ದಾನೆ. ಹಳೆಯ ದ್ವೇಷ ಹಾಗೂ ಗ್ಯಾಂಗ್ ಸ್ಟಾರ್ ಕಟ್ಟಿಕೊಳ್ಳುವ ಖಯಾಲಿಯೇ ಈ ಕೃತ್ಯಕ್ಕೆ ಕಾರಣ ಎಂದು ತಿಳಿಸಿದರು.
ಕಾತ್ರಾಳ ಗ್ರಾಮದಲ್ಲಿ ನಡೆದಿದ್ದ ಸತ್ಸಂಗ ವೇಳೆಯೂ ಭೈರಗೊಂಡ ಮೇಲೆ ದಾಳಿ ನಡೆಸುವ ಸ್ಕೇಚ್ ಆರೋಪಿಗಳು ರೂಪಿಸಿದ್ದರು. ಆದರೆ ಆ ಕಾರ್ಯಕ್ರಮ ಕೊರೊನಾ ಹಿನ್ನೆಲೆಯಲ್ಲಿ ರದ್ದಾಗಿದ್ದರಿಂದ ಸಾಧ್ಯವಾಗಲಿಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಧರ್ಮರಾಜ್ ಚಡಚಣ ಹಳೆಯ ಸಹಚರರು ಈ ಕತ್ಯದಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸುಹಾಸ್ ತಿಳಿಸಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವರಿಗೆ ಕಾಸು ಸಂಪಾದಿಸುವ ಖಯಾಲಿಯಾದರೆ, ಇನ್ನು ಕೆಲವರಿಗೆ ಗ್ಯಾಂಗ್ ಸ್ಟಾರ್ ಆಗುವ ಇರಾದೆ. ಇನ್ನೂ ಕೆಲ ವ್ಯಕ್ತಿಗಳ ಮೇಲೆ ಅಭಿಮಾನ ಮೋಹ ಇರುವುದು ಗೊತ್ತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಡಿವಾಳ ಹಿರೇಮಠ ಬಂಧನದ ಬಳಿಕ ವಿವರ ಗೊತ್ತಾಗಲಿದೆ ಎಂದವರು ತಿಳಿಸಿದರು. ಎಸ್ಪಿ ಅನುಪಮ ಅಗರವಾಲ ಮತ್ತಿತರರಿದ್ದರು.