ಹೊಸದಿಲ್ಲಿ ಅ.17: ಲಾಕ್ಡೌನ್ ಅವಧಿಯಲ್ಲಿ ಎಷ್ಟೋ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದೆ ಸಂಸಾರದ ನಿರ್ವಹಣೆ ಎಷ್ಟು ಕಷ್ಟ ಅಂತಾ ಉದ್ಯೋಗ ಕಳೆದುಕೊಂಡವರಿಗೆ ಗೋತು. ಅಂಥವರಿಗೆ ಇಲ್ಲೊಂದು ಶುಭ ಸಮಾಚಾರವವಿದೆ. ಉದ್ಯೋಗ ಕಳೆದುಕೊಂಡವರಿಗೆ ಕೇಂದ್ರ ಸರಕಾರ ಸಹಾಯಹಸ್ತ ನೀಡಲು ಮುಂದಾಗಿದ್ದು, ಅಟಲ್ ಬೀಮಿತಿ ವ್ಯಕ್ತಿ ಕಲ್ಯಾಣ್ ಯೋಜನೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಶುಕ್ರವಾರ ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಿದೆ.
ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ‘ಅಟಲ್ ಬೀಮಿತಿ ವ್ಯಕ್ತಿ ಕಲ್ಯಾಣ್ ಯೋಜನೆ’ ( ಎಬಿವಿಕೆವೈ) ಯಡಿ 3 ತಿಂಗಳುಗಳ ಕಾಲ ಅವರ ವೇತನದ ಶೇ.50ರಷ್ಟು ಮೊತ್ತವನ್ನು ಸರಕಾರ ವಿತರಿಸಲಿದೆ. ಈಗಾಗಲೇ ಕೆಲಸಕ್ಕೆ ಸೇರಿದ್ದರೂ ಉದ್ಯೋಗ ನಷ್ಟದ ಅವಧಿಗೆ ಪರಿಹಾರ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರಕಾರ 44,000 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಪಿಎಫ್ ಮತ್ತು ಇಎಸ್ಐ ಸೌಲಭ್ಯ ಇರುವ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರೆ, ಅಂತಹವರಿಗೆ ಈ ಯೋಜನೆಯಡಿ ಆದ್ಯತೆ ನೀಡಲಾಗುವುದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಕನಿಷ್ಠ 2 ವರ್ಷಗಳ ಕಾಲ ವಿಮಾ ಸೌಲಭ್ಯ ಹೊಂದಿರುವ ಉದ್ಯೋಗದಲ್ಲಿರಬೇಕು. ಅಂದರೆ, ಪಿಎಫ್ ಹಾಗೂ ಇಎಸ್ಐ ಕಡಿತವಾಗುತ್ತಿದ್ದರೆ, ನೀವು ಈ ಯೋಜನೆಗೆ ಅರ್ಹರಾಗಿರುತ್ತಿರಿ. ಕನಿಷ್ಠ 2 ವರ್ಷಗಳ ಕಾಲ ಉದ್ಯೋಗದಲ್ಲಿದ್ದು, ಕೊರೊನಾ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡಿದ್ದರೆ, ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ನೀವು ಕೆಲಸ ಕಳೆದುಕೊಂಡು 30 ದಿನಗಳಾಗಿದ್ದರೆ, ಇಂದೇ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯ 2020ರ ಮಾರ್ಚ್ 24ರಿಂದ ಡಿಸೆಂಬರ್ 31ರವರೆಗೆ ಲಭ್ಯವಿದೆ.
ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಒಂದು ವೇಳೆ ನೀವು ಕೆಲಸ ಕಳೆದುಕೊಂಡಿದ್ದರೆ, ಸರಕಾರದಿಂದ ನಿರುದ್ಯೋಗ ಭತ್ಯೆ ಪಡೆಯಬಹದು. ಇದಕ್ಕಾಗಿ ನೀವು ಆನ್ಲೈ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ ವಿಧಾನ ಅನುಸರಿಸಿ.
• ಹಂತ 1: ಇಎಸ್ಐಸಿ ವೆಬ್ಸೈಟ್ (https://www.esic.nic.in/) ಅಟಲ್ ಬೀಮಿತಿ ವ್ಯಕ್ತಿ ಕಲ್ಯಾಣ್ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿದ್ದು, ಇಲ್ಲಿ ಅರ್ಜಿ ನಮೂನೆ ಲಭ್ಯವಿದೆ.
• ಹಂತ 2: ಇಎಸ್ಐಸಿ ಭೇಟಿ ನೀಡಿ ‘ಅಟಲ್ ಬೀಮಿತಿ ವ್ಯಕ್ತಿ ಕಲ್ಯಾಣ್ ಯೋಜನೆ’ ಬಟನ್ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತರೆದುಕೊಳ್ಳುತ್ತದೆ. ಈ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.
• ಹಂತ 3: ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ಸನಿಹದ ಇಎಸ್ಐಸಿ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
• ಹಂತ 4: ಅರ್ಜಿ ಜತೆಗೆ ನಾನ್-ಜುಡೀಶಿಯಲ್ ಸ್ಟ್ಯಾಂಪ್ ಪೇಪರ್ನಲ್ಲಿ ಎಬಿ-1ರಿಂದ ಎಬಿ-4 ನಮೂನೆಗಳನ್ನು ಸಲ್ಲಿಸಬೇಕು. ಸರಕಾರದಿಂದ ನೀಡಲಾಗುವ ಯಾವುದಾದರೂ ಅಧಿಕೃತ ಗುರುತಿನ ಚೀಟಿ ಇರಬೇಕು.
ಸೂಚನೆ: ಈ ಯೋಜನೆಯಡಿ ಕೇವಲ ಒಂದು ಬಾರಿ ಮಾತ್ರ ಅನುಕೂಲ ಪಡೆಯಬಹುದು. ಈ ಹಿಂದೆ ನೀವು ಅರ್ಜಿ ಸಲ್ಲಿಸಿ, ಫಲಾನುಭವಿಗಳಾಗಿದ್ದರೆ, ಮತ್ತೆ ಅರ್ಜಿ ಸಲ್ಲಿಸಲಾಗದು.