ವಿಜಯಪುರ ಅ.05: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳ ವಿರುದ್ದ ಕಠಿಣ ಕ್ರಮ, ಸಾಕ್ಷಿನಾಶಪಡಿಸಿದ ಉತ್ತರ ಪ್ರದೇಶ ಪೋಲೀಸ ಅಧಿಕಾರಿಗಳ ವಿರುದ್ದ ದೌರ್ಜನ್ಯ ತಡೆ ಪ್ರಕರಣದಡಿ ಕೇಸು ದಾಖಲಿಸಿ ಜೈಲಿಗಟ್ಟಬೇಕು ಎಂದು ದಲಿತ ಸೇನೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದಲಿತರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ, ಅಪಹರಣ, ಕೊಲೆ, ಸುಲಿಗೆ, ಸಾಮಾಜಿಕ ಬಹಿಷ್ಕಾರದಂತಹ ಭೀಕರ ಘಟನೆಗಳು ಎಗ್ಗಿಲ್ಲದೇ ನಡೆಯುತ್ತಿವೆ, ದುಷ್ಟಶಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಅಂಗೈಯಲ್ಲಿ ಜೀವ ಹಿಡಿದು ಬದುಕು ನಡೆಸುವಂತಾ ದುಃಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯಕ್ಕೊಳಗಾದವರನ್ನು ರಕ್ಷಿಸಬೇಕಾದ ಕಾನೂನು ದುರುಳರ ಕೈಯಲ್ಲಿ ಒದ್ದಾಡುತ್ತಿದೆ.
ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಮೇಲಿನ ಜನಸಾಮಾನ್ಯರ ನಂಬಿಕೆಗೆ ಭಂಗ ಉಂಟಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ಆಗುತ್ತಿಲ್ಲಾ, ಇಂತಹ ಪ್ರಜಾ ವಿರೋಧಿ ಸರಕಾರ ಮಹಿಳೆಯರಿಗೆ ಮತ್ತು ದಲಿತರಿಗೆ ಕಂಟಕವಾಗಿದ್ದು, ರಾಷ್ಟ್ರಪತಿಗಳು ಕೂಡಲೇ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ ಕಾನೂನು ಪಾಲನೆ ಮಾಡಬೇಕೆಂದು ದಲಿತ ಸೇನೆಯು ಆಗ್ರಹಪಡಿಸಿತು.