ಬೆಂಗಳೂರು ಜೂನ್. 20: ಮಾಜಿ ಸಚಿವ ಎಚ್ ವಿಶ್ವನಾಥರವರು ಪರಿಷತ್ ಗೆ ನನ್ನನ್ನು ಸಾಹಿತ್ಯ ಕ್ಷೇತ್ರದಿಂದಾದರೂ ಆಯ್ಕೆ ಮಾಡಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ಹೇಳಿದ್ದಾರೆ.
ಪರಿಷತ್ಗೆ ನನ್ನನ್ನ ನಾಮ ನಿರ್ದೇಶನ ಮಾಡಲು ಯಾವುದೇ ತೊಡಕಿಲ್ಲ. 40 ವರ್ಷಗಳಿಂದ ಈ ರಾಜಕಾರಣದಿಂದ ಏರು-ಪೇರು, ಒಳ್ಳೆಯದ್ದು-ಕೆಟ್ಟದ್ದು ಎಲ್ಲವನ್ನೂ ಅನುಭವಿಸಿಕೊಂಡು ಬಂದಿದ್ದೇವೆ. ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ ಎಂದು ಹೇಳಿದರು.
ನಾನೊಬ್ಬ ಬರಹಗಾರ, ನನ್ನ ಪುಸ್ತಕಗಳು ರಾಜಕೀಯಕ್ಕೆ ಸಂಬಂಧಪಟ್ಟಿವೆ. ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಹೇಳಿದ್ದೇನೆ. ಇದಕ್ಕೆ ಸಿಎಂ ಒಪ್ಪಿದ್ದು ಆಗಬಹುದು ಎಂದು ಹೇಳಿದ್ದಾರೆ. ನನಗೂ ಕಾನೂನಿನ ಅರಿವಿದೆ. ಎಂಟಿಬಿ ನಾಗರಾಜ್ ಆಯ್ಕೆಗೆ ತೊಡಕಿಲ್ಲ ಅನ್ನೋದಾದರೆ ನನಗೆ ಏಕೆ ತೊಡಕಾಗುತ್ತದೆ ಎಂದು ಪ್ರಶ್ನಿಸಿದರು.