ವಿಜಯಪುರ ಮೇ.28 : ಜೂನ್ ತಿಂಗಳಿಂದ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಕೋಟಿ ವೃಕ್ಷ ಅಭಿಯಾನ ಸಂಪೂರ್ಣ ಸಫಲತೆ ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ಬೆಳೆಸುವ ಗುರಿಯಲ್ಲಿ ಬಾಕಿ ಉಳಿದ 25 ಲಕ್ಷ ಸಸಿಗಳನ್ನು ಬೆಳೆಸುವ ಮೂಲಕ ಈ ವರ್ಷದ ಗುರಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.
ಕೋಟಿ ವೃಕ್ಷ ಅಭಿಯಾನದ ಪೂರ್ವ ಸಿದ್ಧತೆ ಕುರಿತು ಸಭೆ ನಡೆಸಿದ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 75 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಈ ವರ್ಷ 25 ಲಕ್ಷ ಸಸಿಗಳನ್ನು ವಿವಿಧ ಪ್ರದೇಶಗಳಲ್ಲಿ ನೆಡುವುದರ ಮೂಲಕ 1 ಕೋಟಿ ಸಸಿಗಳನ್ನು ನೆಡುವ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಜಿಲ್ಲೆಯ ಭೂತನಾಳ ಕೆರೆಯ ಹತ್ತಿರವಿರುವ ಕರಾಡದೊಡ್ಡಿ ಸೇರಿದಂತೆ ಜಿಲ್ಲೆಯಾದ್ಯಂತ ಈಗಾಗಲೇ 75 ಲಕ್ಷ ಗಿಡಗಳು ಜೀವ ಪಡೆದುಕೊಂಡಿದ್ದು, ಪಕ್ಷಿ ಸಂಕುಲಕ್ಕೆ ಹೆಚ್ಚಿನ ರೀತಿಯ ಆಕರ್ಷಣೆಯಾಗುತ್ತಿದೆ. ಜಿಲ್ಲೆಯಲ್ಲಿ ಅರಣ್ಯವಲಯ ಹೆಚ್ಚಿನ ಪ್ರಮಾಣದಲ್ಲಿ ಬಲ ಹೊಂದುತ್ತಿದ್ದು, ಅರಣ್ಯ ಪ್ರದೇಶಕ್ಕೆ ನಾವೆಲ್ಲರು ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಾಲಿನಲ್ಲಿ ಒಟ್ಟು 25 ಲಕ್ಷ ಸಸಿಗಳನ್ನು ವಿವಿಧ ಸ್ಥಳಗಳಲ್ಲಿ ನೆಡುವ ಗುರಿಯನ್ನು ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗ ಕೆಬಿಜೆಎನ್ಎಲ್ ಹಾಗೂ ವಿವಿಧ ನರ್ಸರಿಗಳಿಂದ 8 ಲಕ್ಷ ಸಸಿಗಳನ್ನು ಗುರುತಿಸಿ ಜೂನ್ ಮಾಹೆಯಿಂದ ಕಾರ್ಯ ಪ್ರಾರಂಭಿಸಬೇಕು. ವಿವಿಧ ಜಾತಿಯ ಸಸಿಗಳನ್ನು ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಹಾಗೂ ಅವುಗಳ ಸೂಕ್ತ ಪೋಷಣೆಯ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಆಕ್ರಮಿತ ಪ್ರದೇಶ ಹಾಗೂ ಖಾಲಿ ಇರುವ ಜಾಗಗಳನ್ನು ಈಗಲೇ ಗುರುತಿಸಲು ಪ್ರಾರಂಭಿಸಬೇಕು. ಜೊತೆಗೆ ಸಸಿಗಳನ್ನು ನೆಡಲು ಇರಾದೆ ವ್ಯಕ್ತವಾಗಿದ್ದು, ಜಿಲ್ಲೆಯ ವಿವಿಧ ಸ್ಥಳಗಳನ್ನು ಗುರುತಿಸಿ ಜೂನ್ ಮಾಹೆಯಿಂದ ಕಾರ್ಯ ಪ್ರಾರಂಭಿಸಬೇಕು. ವಿವಿಧ ಜಾತಿಯ ಸಸಿಗಳನ್ನು ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಹಾಗೂ ಅವುಗಳ ಸೂಕ್ತ ಪೋಷಣೆಯ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಆಕ್ರಮಿತ ಪ್ರದೇಶ ಹಾಗೂ ಖಾಲಿ ಇರುವ ಜಾಗಗಳನ್ನು ಈಗಲೇ ಗುರುತಿಸಲು ಪ್ರಾರಂಭಿಸಬೇಕು. ಜೊತೆಗೆ ಸಸಿಗಳನ್ನು ನೆಡಲು ಸೂಕ್ತ ಪ್ರದೇಶಗಳ ವರದಿಯನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಎರಡು ದಿನಗಳೊಳಗೆ ನೀಡಬೇಕು. ಜೂನ್ ಮೊದಲನೇ ವಾರದಿಂದಲೇ ಸಸಿ ನೆಡುವ ಕಾರ್ಯ ಪ್ರಾರಂಭವಾಗಬೇಕು ಎಂದು ತಿಳಿಸಿದರು.
ಕೆಬಿಜೆಎನ್ಎಲ್ ದಿಂದ ಜೂನ್ ಮಾಹೆ ಪ್ರಾರಂಭದಿಂದ ಕೃಷ್ಣಾ ನದಿ ತೀರದ ರೈತರಿಗೆ ಸಸಿ ವಿತರಣೆ ಪ್ರಾರಂಭಿಸಬೇಕು. ಹಾಗೂ ವಿವಿಧ ನರ್ಸರಿಗಳು ತಮ್ಮಲ್ಲಿರುವ ಸಸಿಗಳ ಮಾಹಿತಿಯನ್ನು ನೀಡಬೇಕು. ಸರ್ಕಾರಿ ಕಚೇರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜ ಆವರಣಗಳಲ್ಲಿ ಸಸಿ ನೆಡುವಂತಾಗಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಉದ್ಯಾನವನಗಳ ಸುತ್ತಲು ಗಿಡಗಳನ್ನು ನೆಡಬೇಕು. ಹಾಗೂ ಅವುಗಳ ಪಾಲನೆ, ಪೋಷಣೆ ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಈಗಾಗಲೇ ಭೂತನಾಳದ ಕರಾಡದೊಡ್ಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಸಿಗಳನ್ನು ನೆಡಲಾಗಿದ್ದು, ವಿವಿಧ ಜಾತಿಯ ಪಕ್ಷಿಗಳಿಗೆ ಆಕರ್ಷಣೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 285 ವಿವಿಧ ಜಾತಿಯ ಪಕ್ಷಿಗಳಿದ್ದು, ಭೂತನಾಳದ ಸುತ್ತಮುತ್ತಲಿನ ಪ್ರದೇಶದಲ್ಲೆ 185ಕ್ಕೂ ಹೆಚ್ಚಿನ ವಿವಿಧ ಜಾತಿಯ ಪಕ್ಷಿ ಸಂಕುಲ ವಾಸವಾಗಿದೆ ಎಂದು ಹೇಳಿದರು.
ಕೋಟಿವೃಕ್ಷ ಅಭಿಯಾನದ ಅಂಗವಾಗಿ ಜಿಲ್ಲೆಯ ಕರಾಡದೊಡ್ಡಿಯಲ್ಲಿ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಸ್ಯ ಸಂಗಮ ಉದ್ಯಾನವನ ಪ್ರಾರಂಭಿಸುವ ನಿಟ್ಟಿನಲ್ಲಿ ವಿವಿಧ ಜಾತಿಯ ಗಿಡಗಳ ವರದಿಯನ್ನು ಪಡೆಯಲಾಗಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.