ಧಾರವಾಡ: ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಆಯುಷ್ ಔಷಧಿ ವಿತರಣೆಗೆ ಕ್ರಮ : ಎಸ್‍ಪಿ ವರ್ತಿಕಾ ಕಟಿಯಾರ್

0
211

ಧಾರವಾಡ ಏ.28: ಕೋವಿಡ್-19 ಕೊರೊನಾ ವೈರಸ್ ತಡೆಗಟ್ಟಲು ಹಗಲಿರುಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ರೋಗ ನಿರೋಧಕ ಹಾಗೂ ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.

ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಆಯುಷ್ ವೈದ್ಯರು ನೀಡಿರುವ ಆಯುರ್ವೇದಿಕ್ ಚವನಪ್ರಾಶ್ ಮತ್ತು ಹೋಮಿಯೋಪತಿಯ ಅರ್ಸಾನಿಕ್ ಆಲ್ಬಂ ಮಾತ್ರೆಗಳನ್ನು ಪೊಲೀಸ್ ಪೇದೆಗಳಿಗೆ ವಿತರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯ 753ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಚೆಕ್‍ಪೋಸ್ಟ್ ಸೇರಿದಂತೆ ವಿವಿಧೆಡೆ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಪರೀಕ್ಷೆಯೊಂದಿಗೆ ಅವರಲ್ಲಿ ರೋಗನಿರೋಧಕ ಮತ್ತು ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಔಷಧಿಯನ್ನು ನೀಡಲಾಗುತ್ತಿದೆ. ಇದು ಪರಿಣಾಮಕಾರಿ ಔಷಧವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೋಮ್‍ಕ್ವಾರಂಟೈನ್‍ದಲ್ಲಿರುವ ವ್ಯಕ್ತಿಗಳಿಗೂ ಆಯುಷ್ ಔಷಧಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ ಕಲಹಾಳ ಮಾತನಾಡಿ, ಕೋವಿಡ್-19 ಸೊಂಕು ತಡೆಯಲು ಆರಂಭದಿಂದಲೂ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಆಯುಷ್ ವೈದ್ಯರು, ಹೋಮಿಯೋಪತಿ ಹಾಗೂ ಆಯುರ್ವೇದ ಕಾಲೇಜುಗಳು ಜಿಲ್ಲಾಡಳಿತದೊಂದಿಗೆ ಶ್ರಮಿಸುತ್ತಿವೆ. ಧಾರವಾಡದ ಬಿ.ಡಿ. ಜತ್ತಿ ಹಾಗೂ ಸತ್ತೂರಿನ ಸತ್ಯಸಾಯಿ ಹೋಮಿಯೋಪತಿ ಮೆಡಿಕಲ್ ಕಾಲೇಜ್‍ನಿಂದ ಆಯುರ್ವೇದಿಕ್ ಔಷಧಿಯನ್ನು ಉಚಿತವಾಗಿ ನೀಡುತ್ತಿದ್ದಾರೆ.

ಎಲ್ಲ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ 70 ಕ್ಕೂ ಹೆಚ್ಚು ಖಾಸಗಿ ಆಯುಷ್ ವೈದ್ಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ, ಸಂಜೀವಿನಿ ಮೆಡಿಕಲ್ ಕಾಲೇಜು ಹಾಗೂ ಧಾರವಾಡದ ಬಿ.ಡಿ. ಜತ್ತಿ ಹೋಮಿಯೋಪತಿ ಮೆಡಿಕಲ್ ಕಾಲೇಜುಗಳು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿವೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ 1033 ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಹಂತದ ಆರೋಗ್ಯ ಸಿಬ್ಬಂದಿಗಳಿಗೆ, ಎಲ್ಲ ಅಧಿಕಾರಿಗಳಿಗೆ ಆಯುರ್ವೇದ ಔಷಧಿಯನ್ನು ಆಯುಷ್ ಇಲಾಖೆಯಿಂದ ನೀಡಲಾಗುವುದು ಎಂದು ಅವರು ಹೇಳಿದರು.

ಡಿವೈಎಸ್‍ಪಿ ರವಿ ನಾಯ್ಕ ಮಾತನಾಡಿ, ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು ಭಾರತೀಯ ಇತಿಹಾಸದಲ್ಲಿ ಪ್ರಮುಖವಾಗಿದ್ದು ಪರಿಣಾಮಕಾರಿಯಾಗಿವೆ. ಕೊರೊನಾದಂತ ಕ್ಲಿಷ್ಟ ಸಮಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಆಯುಷ್ ಔಷಧಿ ರಕ್ಷಣೆ ನೀಡುವುದರೊಂದಿಗೆ ಮಾನಸಿಕ ನೆಮ್ಮದಿ ನೀಡುತ್ತದೆ. ಜಿಲ್ಲೆಯ ಪ್ರತಿ ಪೊಲೀಸ್ ಸಿಬ್ಬಂದಿಗೆ ಆಯುಷ್ ಔಷಧಿಯನ್ನು ತಲುಪಿಸಲಾಗುವುದು ಎಂದು ಹೇಳಿದರು.

ಹೋಮಿಯೋಪತಿ ಹಾಗೂ ಆರ್ಯುವೇದಿಕ್ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಸಿ.ಸಿ.ಐ.ಎಂ ಸದಸ್ಯ ಡಾ.ಶ್ರೀನಿವಾಸ ಬನ್ನಿಗೋಳ, ಎ.ಎಫ್.ಐ.ರಾಜ್ಯ ಪ್ರದಾನ ಕಾರ್ಯದರ್ಶಿ ಡಾ ಸೋಮಶೇಖರ ಹುದ್ದಾರ, ರಾಜ್ಯಕಾರ್ಯಕಾರಿ ಸದಸ್ಯ ಡಾ. ಅಮೀತ ಎಂ.ಎಸ್., ಎ.ಎಫ್.ಐ.ಜಿಲ್ಲಾಧ್ಯಕ್ಷ ಡಾ.ವೈ.ರವೀಂದ್ರ, ನೀಮಾ ಜಿಲ್ಲಾ ಕಾರ್ಯದರ್ಶಿ ಡಾ. ತ್ಯಾಗರಾಜ, ಹೆಚ್.ಎಂ.ಎ.ಐ. ಜಿಲ್ಲಾಧ್ಯಕ್ಷ ಡಾ.ಕಿರಣಕುಮಾರ ಗಡ್ಡಿ, ಹೆಚ್.ಎಂ.ಎ.ಐ.ತಾಲೂಕು ಅಧ್ಯಕ್ಷ ಪ್ರಶಾಂತ ಕುಬಸದ, ಹೋಮಿಯೋ ಕಾಲೇಜು ಸಿ.ಎಂ.ಓ. ಡಾ.ಕೌಸರ ಆಮಾದಾರ, ಜಿಲ್ಲೆಯ ಆಯುಷ್ ಕಾಲೇಜು ಪ್ರಾಚಾರ್ಯರುಗಳಾದ ಡಾ.ಎ.ಎಸ್. ಪ್ರಶಾಂತ, ಡಾ.ಹೆಚ್.ಟಿ. ಹೊಂಬಳ, ಡಾ.ಕಿರಣ ಸಾಣಿಕೊಪ್ಪ, ಆಯುಷ್ ನೋಡಲ್ ಅಧಿಕಾರಿ ಡಾ.ಬಿ.ಪಿ. ಪೂಜಾರಿ ಉಪಸ್ಥಿತರಿದ್ದರು.


 

LEAVE A REPLY

Please enter your comment!
Please enter your name here