ಅಪ್ಪಳಿಸಿದ ‘ನಿವಾರ್‌’ ಚಂಡಮಾರುತ

ಚೆನ್ನೈ ನ.26: ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ತೀರಕ್ಕೆ ನಿವಾರ್‌ ಚಂಡಮಾರುತ ಅಪ್ಪಳಿಸಿದೆ.  ಗಂಟೆಗೆ 150 ಕಿ.ಮೀ ವೇಗದಲ್ಲಿ ‘ನಿವಾರ್‌’ ಚಂಡಮಾರುತ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಚಂಡಮಾರುತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿ ಸೃಷ್ಟಿಯಾಗಿದೆ.

ನಿವಾರ್‌ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ರಾತ್ರಿ 11.30 ರಿಂದ 2.30 ರ ನಡುವೆ 120- 130 ಕಿಮೀ ವೇಗದಲ್ಲಿ  ಸತತ ಮೂರು ಗಂಟೆಗೂ ಹೆಚ್ಚು ಕಾಲ ಅಪ್ಪಳಿಸಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.

ಗಾಳಿಯ ರಭಸಕ್ಕೆ ಹಲವು ಮರಗಳು ಧರೆಗೆ ಉರುಳಿದೆ. ಅಲ್ಲದೆ ಹಲವು ಸಾರ್ವಜನಿಕ ಆಸ್ತಿಗಳಿಗೂ ಹಾನಿಯಾಗಿದೆ. ಗುರುವಾರ ಸಂಜೆವರೆಗೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

ಹೀಗಾಗಿ ಚೆನ್ನೈ ನಗರ ಸೇರಿದಂತೆ ಒಟ್ಟಾರೆ 13 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಿಸಲಾಗಿದೆ. ನಾಗಪಟ್ಟಣಂ, ಕಡಲೂರು, ವಿಲ್ಲುಪುರಂ, ಚೆಂಗಲ್‌ಪಟ್ಟು ಮತ್ತು ಆಂಧ್ರಪ್ರದೇಶದ ನೆಲ್ಲೂರು, ಚಿತ್ತೂರು ಹಾಗೂ ರಾಯಲ್‌ಸೀಮೆಯಲ್ಲಿ ಭಾರಿ ಮಳೆ ಬೀಳುವ ನಿರೀಕ್ಷೆಯಿದೆ.

ಇನ್ನು ತಮಿಳುನಾಡಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 6 ತಂಡಗಳು ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪ್ರಾಣಹಾನಿ ತಡೆಗಾಗಿ ಎರಡು ಲಕ್ಷಕ್ಕೂ ಅಧಿಕ ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ.


Share the Post:

ಇತ್ತೀಚಿನ ಸುದ್ದಿಗಳು