ಬಾಗಲಕೋಟೆ: 71ನೇ ಅಖಿಲ ಭಾರತ ಸಹಕಾರ ಸಪ್ತಾಹ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದುವಲ್ಲಿ ಪರಸ್ಪರ ಸಹಕಾರ ಅವಶ್ಯವಾಗಿದ್ದು, ಎಲ್ಲ ರಂಗಗಳಿಗೂ ಈ ಸಹಕಾರಿ ರಂಗ ಮುನ್ನುಡಿ ಬರೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹುಬ್ಬಳ್ಳಿ ಬೈಪಾಸ್ ರಸ್ತೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪಕ್ಕದ ಮೈದಾನದಲ್ಲಿ ಹಮ್ಮಿಕೊಂಡ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಸಹಕಾರ ರಂಗ ಬಲಿಷ್ಟವಾಗಬೇಕಾದರೆ, ಜ್ಯಾತ್ಯಾತೀತ, ಧರ್ಮಾತೀತ ಹಾಗೂ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ದುಡಿದಾಗ ಮಾತ್ರ ಸಾಧ್ಯವೆಂದು ತಿಳಿಸಿದರು.
ಇದನ್ನೂ ಓದಿ: Vijayapura News | ಶರಣರು ಸಮ ಸಮಾಜದ ಚಿಂತಕರು: ಪ್ರೋ. ಲಕ್ಷ್ಮೀ ಮೋರೆ ಅಭಿಮತ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶದಲ್ಲಿಯೇ ಸಹಕಾರ ಕ್ಷೇತ್ರಕ್ಕೆ ಮುನ್ನುಡಿ ಬರೆದಿದ್ದು, ನಮ್ಮ ರಾಜ್ಯದ ಗದಗ ಜಿಲ್ಲೆಯ ಕನಗಿನಹಾಳ ಶಿವನಗೌಡ್ರ 1904ರಲ್ಲಿ ಸ್ಥಾಪಿಸಿದ ಸಹಕಾರಿ ಸಂಘ. ಸ್ವಾತಂತ್ರ್ಯದ ನಂತರ ನೆಹರು ಹಾಗೂ ಗಾಂಧಿಜೀಯವರು ಈ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಈ ಸಹಕಾರಿ ಕ್ಷೇತ್ರವು ಒಳಗೊಂಡಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ಗ್ರಾಮ ಸ್ವರಾಜ್ಯ ಆಗಬೇಕೆಂಬ ಗಾಂಧೀಜಿಯವರ ಕಲ್ಪನೆಯಂತೆ ಗ್ರಾಮೀಣ ಪ್ರದೇಶದಲ್ಲಿ ಮೊದಲು ಆರ್ಥಿಕವಾಗಿ ಪ್ರಬಲರಾದಾಗ ಮಾತ್ರ ದೇಶ ಸುಭದ್ರವಾಗುತ್ತದೆ ಎಂಬ ಮುಖ್ಯದ್ಯೇಯ ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ವಾಕ್ಯವನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.
ಸಹಕಾರಿ ಕ್ಷೇತ್ರದಲ್ಲಿ ನಂಬಿಕೆ ಬಹಳ ಮುಖ್ಯವಾಗಿದ್ದು, ಗ್ರಾಮೀಣ ಬದುಕಿನ ಆರ್ಥಿಕ ಬೆಳೆವಣಿಗೆ ಆಗಬೇಕಾದರೆ ಮಹಿಳೆಯರು, ಯುವಕರು ಮುಕ್ತವಾಗಿ ಸಹಕಾರಿ ಕ್ಷೇತ್ರದಲ್ಲಿ ಪಾಲ್ಗೊಳ್ಳುವ ಕೆಲಸವಾಗಬೇಕು. ಅಲ್ಲದೇ ವಿಶೇಷವಾಗಿ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ಹೆಚ್ಚು ಹೆಚ್ಚು ತೊಡಗಿಸುವ ಕಾರ್ಯವಾದಾಗಾ ಮಾತ್ರ ವಿಕಾಸ ಹೊಂದಲು ಸಾಧ್ಯ. 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ವರ್ಗದವರಿಗೂ ಉಚಿತವಾಗಿ ಸದಸ್ಯತ್ವಕ್ಕೆ ಅಣಿ ಮಾಡಿಕೊಟ್ಟಿದ್ದೆ. ಪಶು ಸಂಗೋಪನೆ ಸಚಿವನಾಗಿದ್ದಾಗ ಹಾಲು ಉತ್ಪಾದಕ ಸಹಕಾರಿ ಸಂಘಗಳು ಹಾಗೂ ಡೈರಿಗಳು ಬೇರೆ ಬೇರೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರೆಡರನ್ನು ಒಂದುಗೂಡಿಸಿ ಹಾಲು ಉತ್ಪಾದಕರ ಮಹಾಮಂಡಳ ಎಂದು ಮಾಡಲಾಯಿತು ಎಂದರು.
ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ MCA ಕೋರ್ಸ್ ಗೆ ಅರ್ಜಿ ಆಹ್ವಾನ
ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ ವಿಜಯಪುರ ಬಾಗಲಕೋಟೆ ಜಿಲ್ಲೆಗಳು ಒಂದಾಗಿದ್ದರೆ ಇಂದು ಸಹಕಾರ ಕ್ಷೇತ್ರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದೇವು. ವಿಜಯಪುರ ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಥಮದಲ್ಲಿ ಪಾಂಡುರಂಗ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಕೇವಲ 63 ಸಾವಿರ ಬಂಡವಾಳದಲ್ಲಿ ಕಾರ್ಯನಿರ್ವಹಿಸಿ ಇಂದು 13 ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿದೆ ಎಂದರು.
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ ಯಾವುದೇ ಒಂದು ಸಹಕಾರಿ ಸಂಸ್ಥೆ ಕಷ್ಟದಲ್ಲಿದ್ದಾಗ ಅದನ್ನು ರಕ್ಷಿಸಿ, ಪೋಷಿಸುವ ಕಾರ್ಯ ಸರಕಾರದ್ದಾಗಿದ್ದು, ಇಂದು ನಮ್ಮ ಜಿಲ್ಲೆಗೆ ಮುಖ್ಯಮಂತ್ರಿಗಳು ಆ ಕಾರ್ಯ ನಡೆಸಿಕೊಟ್ಟಿದ್ದಾರೆ. ಜಿಲ್ಲೆಯ ಒಂದೇ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ರನ್ನ ಸಕ್ಕರೆ ಕಾರ್ಖಾನೆ ಇತ್ತೀಚೆಗೆ ಸ್ಥಗಿತವಾಗುವ ಸಂಭವವಿತ್ತು. ಆ ಸಮಯದಲ್ಲಿ 40 ಕೋಟಿ ರೂ. ನೀಡುವದಲ್ಲಿದೇ ಕಾರ್ಖಾನೆ ಪುನರ್ ಕಾರ್ಯನಿರ್ವಹಿಸುವಲ್ಲಿ ಎಸ್.ಆರ್.ಪಾಟೀಲರ ನೆರವು ಪಡೆದು ಈ ಭಾರಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿದೆ ಎಂದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ಬಾಗಲಕೋಟೆ-ವಿಜಯಪುರ ಅಖಂಡ ಜಿಲ್ಲೆಯಾಗಿದ್ದಾಗ ಮುಂಚುಣಿಯಲ್ಲಿದ್ದ ಕೇಂದ್ರ ಸಹಕಾರಿ ಬ್ಯಾಂಕ್ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಂದು ನಿರ್ದೇಶಕರಾಗಿದ್ದ ಎಸ್.ಆರ್.ಪಾಟೀಲ, ಜೆ.ಟಿ.ಪಾಟೀಲ ಹಾಗೂ ಚಿಮ್ಮನಕಟ್ಟಿಯವರು ಬಾಗಲಕೋಟೆಗೆ ಪ್ರತ್ಯೇಕ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಾರಂಭಿಸಿದರು. ಸದ್ಯ ಎರಡು ಜಿಲ್ಲೆಗಳ ಕೇಂದ್ರ ಸಹಕಾರಿ ಬ್ಯಾಂಕ್ ಮುಂಚೂಣಿಯಲ್ಲಿವೆ ಎಂದರು.
ರಾಜ್ಯ ಸಹಕಾಋ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಪ್ರಾರಂಭದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ 72 ಜನರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಾರಂಭದಲ್ಲಿ ಸಹಕಾರ ಧ್ವಜಾರೋಹ ನೆರವೇರಿಸಿ ಬಲೂನುಗಳ ಗುಚ್ಚವನ್ನು ಆಕಾಶದಲ್ಲಿ ಹಾರಿಬಿಡಲಾಯಿತು.
ಇದನ್ನೂ ಓದಿ: Bagalkote News | ಡಾ.ಡಿ.ಎಲ್.ನರಸಿಂಹಚಾರ್ ಕನ್ನಡ ಭಾಷಾ ವಿದ್ವತ್ತಿನ ಅಸ್ಮೀತೆ : ಡಾ.ಪರಮಶಿವಮೂರ್ತಿ
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಹಾಗೂ ನವದೆಹಲಿ ರಾಜ್ಯ ವಿಶೇಷ ಪ್ರತಿನಿಧ ಪ್ರಕಾಶ ಹುಕ್ಕೇರಿ, ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಶಾಸಕ ಬಿ.ಬಿ.ಚಿಮ್ಮನಕಟ್ಟಿ, ರಾಜ್ಯ ಅಪೇಕ್ಸ್ ಬ್ಯಾಂಕ್ನ ಅಧ್ಯಕ್ಷ ಬೆಳ್ಳಿ ಪ್ರಕಾಶ ಸೇರಿದಂತೆ ಇತರರು ಇದ್ದರು. ಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಅಜಯಕುಮಾರ ಸರನಾಯ ಸ್ವಾಗತಿಸಿದರು.






















