ವಿಜಯಪುರ: ಚಡಚಣ ತಾಲೂಕಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತಾಲೂಕ ಕ್ರೀಡಾಂಗಣಕ್ಕೆ ನಿಗದಿಪಡಿಸಿದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸ್ಥಳ ಪರಿಶೀಲನಾ ನಂತರ ಚಡಚಣ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ ಕಟ್ಟಡ ಕಾಮಗಾರಿ, ಗುಂಪು ಶೌಚಾಲಯ ಕಾಮಗಾರಿ, ಗ್ರಂಥಾಲಯ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಸಾರ್ವಜನಿಕರು ಮೋಸ ಹೋಗದೇ ಜಾಗೃತಿ ವಹಿಸುವಂತೆ ಮನವಿ
ಚಡಚಣದ ತಾಲೂಕಾ ಕಚೇರಿಯಲ್ಲಿ ಅಧಿಕಾರಿ,ಸಿಬ್ಬಂದಿಗಳ ಸಭೆ ನಡೆಸಿ, ದೀರ್ಘಕಾಲ ವಿಲೇವಾರಿಗೊಳ್ಳದೇ ಬಾಕಿ ಇರುವ ಕಡತಗಳನ್ನು ಆದ್ಯತೆ ಮೇರೆಗೆ ವಿಲೇವಾರಿಗೊಳಿಸಲು, ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಕಡತಗಳ ವಿಳಂಬಕ್ಕೆ ಅವಕಾಶ ನೀಡದೇ ಶೀಘ್ರವಾಗಿ ವಿಲೇವಾರಿಗೆ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿಗಳಾದ ಅಬೀದ್ ಗದ್ಯಾಳ, ಚಡಚಣ ತಹಶೀಲ್ದಾರ ಎಸ್.ಬಿ ಇಂಗಳೆ, ಎಡಿಎಲ್ಆರ್ ರಾಜಶೇಖರ ಕಾಂಬ್ಳೆ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಉಪಸ್ಥಿತರಿದ್ದರು.



















