ವಿಜಯಪುರ ನ.25: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷತನದಿಂದ ಬಾಣಂತಿ ಮಹಿಯೊಬ್ಬಳ ಗುಪ್ತಾಂಗದಲ್ಲಿ ರಕ್ತಸ್ರಾವ ತಡೆಯಲು ಇಟ್ಟಿದ್ದ ಡ್ರೆಸ್ಸಿಂಗ್ ಬಟ್ಟೆ ಆರು ತಿಂಗಳವರೆಗೆ ಅಲ್ಲಿಯೇ ಉಳಿದ ಆರೋಪ ಕೇಳಿ ಬಂದಿದೆ.
ಶಾಹಿಲ್ ಲಾಲ್ ಸಾಬ್ ಉತ್ನಾಳ ಎಂಬ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ದರು. ಬಳಿಕ ಈ ಮಹಿಳೆ ನ. 23 ರಂದು ಇದೇ ಆಸ್ಪತ್ರೆಗೆ ಬಂದಿದ್ದಾಳೆ. ತನಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬೇರೆ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಕೂಡ ಮಾಡಿಸಿದ್ದಾಳೆ. ಆದರೆ, ಆ ವೇಳೆ ಏನು ದೋಷ ಕಂಡು ಬಂದಿಲ್ಲ. ಆದರೆ, ನ. 23 ರಂದು ಆಸ್ಪತ್ರೆಗೆ ಬಂದಾಗ ಆಕೆಯ ಗುಪ್ತಾಂಗದಲ್ಲಿದ್ದ ಡ್ರೆಸಿಂಗ್ ಬಟ್ಟೆಯನ್ನು ವೈದ್ಯರು ಹೊರ ತೆಗೆದಿದ್ದಾರೆ.
ಹೆರಿಗೆಯ ನಂತರ ತನಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅಲ್ಲದೇ, ಆಗಾಗ ರಕ್ತಸ್ರಾವ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ತೋರಿಸಿದಾಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಈಗ ಮತ್ತೆ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ವೈದ್ಯ ಡಾ. ಮಕಾನದಾರ ಪರಿಶೀಲಿಸಿ ಗುಪ್ತಾಂಗದಲ್ಲಿದ್ದ ಕೊಳೆತ ಬಟ್ಟೆಯನ್ನು ಹೊರತೆಗೆದು ಮಹಿಳೆಯ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಘಟನೆ ಕುರಿತು ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯ ಮುಖ್ಯಸ್ಥ ಡಾ. ಅನಿಲ್ ಶೇಗುಣಸಿ ಮಾತನಾಡಿ ಈ ವಿಷಯ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಸದ್ಯಕ್ಕೆ ಮಹಿಳೆಗೆ ತಾಲೂಕಾ ಆಸ್ಪತ್ರೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಡಾ. ಶೇಗುಣಸಿ ತಿಳಿಸಿದ್ದಾರೆ.