ಭೂಕಂಪನದ ಬಗ್ಗೆ ಜನರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ

0
201

ವಿಜಯಪುರ ನ.04 : ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ತಂಡವು ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸದ್ಯಕ್ಕೆ ತಾತ್ಕಾಲಿಕ ಭೂಕಂಪನ ಮಾಪಕ ಉಪಕರಣಗಳನ್ನು ಅಳವಡಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ, ಮಸೂತಿ, ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಮತ್ತು ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ಗ್ರಾಮಗಳ ವ್ಯಾಪ್ತಿಯ ಭೂಮಿಯಲ್ಲಿ ಶಬ್ಧವಾಗುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವ್ಶೆಜ್ಞಾನಿಕ ಅಧಿಕಾರಿಗಳಾದ ಶ್ರೀ ಜಗದೀಶ್, ಡಾ.ರಮೇಶ ದಿಕ್ಪಾಲ, ಕಿರಿಯ ವ್ಶೆಜ್ಞಾನಿಕ ಅಧಿಕಾರಿ ಶ್ರೀ ಕೆ.ಕೆ ಅಭಿನಯ, ಕಿರಿಯ ವ್ಶೆಜ್ಞಾನಿಕ ಅಧಿಕಾರಿಗಳನ್ನು ಒಳಗೊಂಡ ಮೂವ್ವರು ಅಧಿಕಾರಿಗಳ ತಂಡವು ಇಂದು ವಿಜಯಪುರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಈ ಗ್ರಾಮಗಳಿಗೆ ಹಾಗೂ ಆ ಗ್ರಾಮಗಳ ಸುತ್ತಮುತ್ತಲಿನ ಖಣಿ ಪ್ರದೇಶಗಳಿಗೆ ಭೇಟಿ ನೀಡಿ, ಖಣಿ ಮಾಲೀಕರು ಸರ್ಕಾರವು ನಿಗದಿಪಡಿಸಿದ ಪದ್ಧತಿಯಲ್ಲಿ ಬ್ಲಾಸ್ಟ್ ಮಾಡುತ್ತಿರುವ ಬಗ್ಗೆ ಅವರಿಂದ ಮತ್ತು ಈ ಗ್ರಾಮಗಳ ಗ್ರಾಮಸ್ಥರಿಂದ ಶಬ್ಧ ಮತ್ತು ಕಂಪನದ ಬಗ್ಗೆ ಹೇಳಿಕೆಯನ್ನು ಪಡೆದಿದೆ.

ರಾಜ್ಯಾದ್ಯಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದಿಂದ ಒಟ್ಟು 14 ಶಾಶ್ವತ ಭೂಕಂಪನಾ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಯಾವ ಭೂಕಂಪನ ಮಾಪನ ಕೇಂದ್ರಗಳಲ್ಲಿಯೂ ಸಹ ಜಿಲ್ಲೆಯ ಈ ಗ್ರಾಮಗಳಲ್ಲಿ ಉಂಟಾದ ಶಬ್ಧ ಮತ್ತು ಕಂಪನದ ಯಾವುದೇ ರೀತಿಯ ಮಾಪನ ದಾಖಲಾಗಿರುವುದಿಲ್ಲ. ಈ ರೀತಿಯ ಶಬ್ಧ ಮತ್ತು ಕಂಪನವು ಈ ಪ್ರದೇಶಗಳಲ್ಲಿ ಆದ ಅತೀ ಹೆಚ್ಚಿನ ಮಳೆಯಿಂದ ಅಂತರ್ಜಲ ಮಟ್ಟದ ಏರಿಕೆಯಿಂದ ಉಂಟಾಗಿರುವ ಪ್ರಕ್ರಿಯೆಯಾಗಿರುತ್ತದೆ. ಅಂತರ್ಜಲ ಮಟ್ಟವು ಕಡಿಮೆಯಾದ ತಕ್ಷಣ ತಾನೇ ಈ ಪ್ರಕ್ರಿಯೆಯೂ ನಿಂತು ಹೋಗುವ ಸಂಭವವಿರುತ್ತದೆ ಎಂದು ವೈಜ್ಞಾನಿಕ ತಂಡ ಅಭಿಪ್ರಾಯಪಟ್ಟಿದೆ.

ಅದರಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಂಡದ ವರದಿಯ ಮೇರೆಗೆ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ತಾತ್ಕಾಲಿಕ ಭೂಕಂಪನ ಮಾಪನ ಕೇಂದ್ರ ಅಳವಡಿಸುವಂತೆ ಜಿಲ್ಲಾಡಳಿತದಿಂದ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಜನರು ಯಾವುದೇ ರೀತಿಯ ಆತಂಕಪಡುವ ಅಗತ್ಯ ಇಲ್ಲ ಹಾಗೂ ನಿರ್ಭೀತಿಯಿಂದ ಇರುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here