ವಿಜಯಪುರ ಅ.21: ಖಚಿತ ಮಾಹಿತಿಯನ್ನಾಧರಿಸಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಬೆಲೆಬಾಳುವ ಒಂದು ದೊಡ್ಡ ಹುಲಿಯ ಚರ್ಮ, ಒಂದು ಕೃಷ್ಣಮೃಗದ ಚರ್ಮ ಹಾಗೂ ಎರಡು ಹುಲಿಯ ಉಗುರುಗಳನ್ನು ಪತ್ತೆ ಹಚ್ಚಿ ಜಪ್ತಿ ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ವಿಜಯಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಶೋಕ ಆರ್ ಪಾಟೀಲ ಅವರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮುಂಜಾನೆ ನಸುಕಿನ ಜಾವ ಖುದ್ದಾಗಿ ಮನೆಯೊಂದರ ಮೇಲೆ ಬಿ.ಪಿ ಚವ್ಹಾಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪ್ರಭುಲಿಂಗ ಭುಯ್ಯಾರ, ವಲಯ ಅರಣ್ಯ ಅಧಿಕಾರಿ, ಗುರು ಲೋಣಿ, ಉಪ ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿಗಳಾದ ಅನೀಲಕುಮಾರ್ ಲೋಣಿ, ಸಿ.ಎಮ್ ಪಟ್ಟಣಶೆಟ್ಟಿ, ಪ್ರವೀಣ ಅಂಗಡಿ, ರವಿ ರಾಠೋಡ, ಆರ್ ಹೆಚ್ ಜಮಾದಾರ, ಶಿವಾನಂದ ಮೇತ್ರಿ, ಎಸ್.ಎಮ್ ಕಾಟೆ, ಬಸಮ್ಮ ಬೋನಾಳ ಹಾಗೂ ಮಹಾದೇವಿ ನಿಡಗುಂದಿಮಠ ಇವರೊಂದಿಗೆ ದಾಳಿ ನಡೆಸಿ, ಆರೋಪಿ ಮಹೇಶ ಹಿರೇಮಠನನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಹಾಗೂ ಗಂಭೀರ ಪ್ರಕರಣವೆಂದು ತಿಳಿಸಿರುವ ಅವರು ಹುಲಿಯು ಅತ್ಯಂತ ವಿರಳ ಪ್ರಾಣಿಯಾಗಿದ್ದು, ನಮ್ಮ ದೇಶದಲ್ಲಿ ಕೇವಲ 2967 ಹುಲಿಗಳು ಮಾತ್ರ ಉಳಿದಿದ್ದು, ಇಂತಹ ಅಪರಾಧ ಪ್ರಕರಣಗಳಲ್ಲಿ ಆರೋಪಿಗೆ 7 ವರ್ಷಗಳ ಶಿಕ್ಷೆಯಾಗುತ್ತದೆ. ಈ ಕೃತ್ಯದ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.