ಶಿಕ್ಷಕರ ದಿನಾಚರಣೆ : ಗಣ್ಯರಿಂದ ಶುಭಾಶಯಗಳು

0
269

ಹೊಸದಿಲ್ಲಿ: ದೇಶದ ಮೊದಲ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆ ಈ ವರ್ಷ ಮಾತ್ರ ಕೊರೊನಾ ಸಂಕಷ್ಟದಿಂದಾಗಿ ಕಳೆಗುಂದಿದೆ. ಮತ್ತು ದೇಶದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ಶೋಕಾಚರಣೆ ಆಚರಿಸುವುದರಿಂದ ಈ ಬಾರಿ ಶಿಕ್ಷಕರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿಲ್ಲ.

ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ, ರಾಷ್ಟ್ರ ನಿರ್ಮಾಣ ಮತ್ತು ವ್ಯಕ್ತಿತ್ವ ರೂಪಿಸುವುದರಲ್ಲಿ ಅವಿರತ ಶ್ರಮ ಪಡುತ್ತಿರುವ ಶಿಕ್ಷಕರ ಕೊಡುಗೆಯನ್ನು ನಾವು ನೆನೆಯುತ್ತೇವೆ. ಶಿಕ್ಷಕರ ದಿನದಂದು ಅವರು ನೀಡಿದ ಗಮನಾರ್ಹ ಕೊಡುಗೆಗಾಗಿ ನಾವು ಶಿಕ್ಷಕರಿಗೆ ಕೃತಜ್ಷರಾಗಿರಬೇಕು ಎಂದು ಶುಭಾಶಯ ತಿಳಿಸಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಡೆತಡೆಗಳನ್ನು ತಡೆಗಟ್ಟಲು ಸಾಂಕ್ರಾಮಿಕ ರೋಗದ ಕಷ್ಟದಿಂದ ದಣಿವರಿಯದೆ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೆ ಧನ್ಯವಾದಗಳು. ಅವರ ಸಮರ್ಪಣೆ, ಧೈರ್ಯ ಮತ್ತು ಅವರ ನಿಸ್ವಾರ್ಥ ಸೇವೆಗೆ ನಮಸ್ಕರಿಸೋಣ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕಲಿಯಲು ಸಿದ್ಧರಿರುವವರಿಗೆ ಇಡೀ ವಿಶ್ವವೇ ಶಿಕ್ಷಕ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೂಡ ಟ್ವೀಟ್ ಮಾಡಿದ್ದು, ನಾಡಿನ ಎಲ್ಲ ಶಿಕ್ಷಕರಿಗೆ ‘ಶಿಕ್ಷಕರ ದಿನ’ದ ಹಾರ್ದಿಕ ಶುಭಾಶಯಗಳು. ಮಾಜಿ ರಾಷ್ಟ್ರಪತಿ ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೆ ನಮಿಸುತ್ತಾ, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ, ಶಿಕ್ಷಣದ ಮೂಲಕ ಭವಿಷ್ಯದ ಸಶಕ್ತ ಪ್ರಜೆಗಳನ್ನು ರೂಪಿಸುವ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಿರುವ ಎಲ್ಲ ನಮ್ಮ ಶಿಕ್ಷಕರಿಗೆ ಗೌರವಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಹಳ್ಳಿಯಲ್ಲಿ ಹುಟ್ಟಿದ ನನ್ನಂತಹವನಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಜನಸೇವೆ ಮಾಡುವ ಅವಕಾಶ ಕೂಡಿ ಬಂದಿದ್ದರೆ ಅದಕ್ಕೆ ನನ್ನನ್ನು ತಿದ್ದಿ ತೀಡಿ ಬೆಳೆಸಿದ ಗುರುಗಳು ಕಾರಣ. ಅವರಿಗೆ ತಲೆಬಾಗಿ ನಮಿಸುವೆ. ನನ್ನಂತಹವನಿಗೆ‌ ಒಲಿದು ಬಂದ ಗುರುಗಳು ಜಗದ‌ ಮಕ್ಕಳೆಲ್ಲರಿಗೂ ಸಿಗಲಿ ಎಂದು ಹಾರೈಸುತ್ತೇನೆ ಎಂದು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here