ವಿಜಯಪುರ: ನಕಲು ಮುಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆ: ಕೊರೋನಾ ಭಯಬೇಡ

0
200

ವಿಜಯಪುರ ಜೂನ್ 24: ಜಿಲ್ಲೆಯಾದ್ಯಂತ ಇದೇ ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಕಲು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು 106 ಮುಖ್ಯ ಪರೀಕ್ಷಾ ಕೇಂದ್ರ ಹಾಗೂ 15 ಉಪ ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 121 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 37,122 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ವಿಜಯಪುರ ನಗರದಲ್ಲಿ ಬಾಹ್ಯ ವಿದ್ಯಾರ್ಥಿಗಳ 4 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ .

ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ 144 ಕಲಂ ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ಯಾವುದೇ ರೀತಿಯ ಝರಾಕ್ಸ್, ಕಂಪ್ಯೂಟರ್, ಇಂಟರ್‍ನೆಟ್ ಕೆಫೆ, ಕೋಚಿಂಗ್ ಸೆಂಟರ್‍ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಕಂಪೌಂಡ್ ಒಳಗಡೆ ಅವಕಾಶ ಇರುವುದಿಲ್ಲ. ಗುಂಪುಗುಂಪಾಗಿ ಸೇರಲು ನಿಷೇಧವಿದ್ದು, ಪಾಲಕರು, ಸಾರ್ವಜನಿಕರು ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಬಿಟ್ಟು ತೆರಳಬೇಕು. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ಅದರಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಖಾಸಗಿ, ಸರ್ಕಾರಿ ಶಾಲಾ ಪದಾಧಿಕಾರಿಗಳು, ಆಡಳಿತ ಮಂಡಳಿ, ಎಸ್.ಡಿ.ಎಮ್.ಸಿ ಮತ್ತು ಅನಧೀಕೃತ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಯಾರಾದರೂ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳು ಮೊಬೈಲ್ ತಂದಲ್ಲಿ ಆಯಾ ಪರೀಕ್ಷಾ ಕೇಂದ್ರಗಳ ಮೊಬೈಲ್ ಸ್ವಾಧೀನಾಧಿಕಾರಿಗಳಿಗೆ ಒಪ್ಪಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ (ಟಿವಿ) ಕ್ಯಾಮರಾ, ಮೂರು ಅಡಿ ಅಂತರದೊಂದಿಗೆ ಮಕ್ಕಳಿಗೆ ಆಸನದ ವ್ಯವಸ್ಥೆ ಪ್ರತಿಯೊಂದು ಡೆಸ್ಕ್ ಗೆ ಇಬ್ಬರು ವಿದ್ಯಾರ್ಥಿಗಳು ಒಳಗೊಂಡಂತೆ ಪ್ರತಿ ಬ್ಲಾಕ್‍ದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 20 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ. ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಲೌಡ್‍ಸ್ಪೀಕರ್ (ಧ್ವನಿವರ್ಧಕ) ಮೂಲಕ ಮಾಹಿತಿ ನೀಡಲಾಗುತ್ತದೆ. ಅದರಂತೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿವಾರಣೆಗೆ ಜಿಲ್ಲಾಮಟ್ಟ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ವಿದ್ಯಾರ್ಥಿಗಳು ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಡಿಡಿಪಿಐ ಸಿ. ಪ್ರಸನ್ನ ಕುಮಾರ ಮೋ.ಸಂ:944899331, ಇಓ ಎಸ್.ಎ ಮುಜಾವರ-9483460011, ಪಿ.ಕೆ ಬಿರಾದಾರ(ಎಸ್.ಐ)-9740314500 ಹಾಗೂ ಎ.ಎ.ಎಲ್ ಬಿಇಒಗಳಾದ ಬಾಗೆವಾಡಿ ಬಿ.ಇ.ಓ-9480695092, ಬಿಇಒ ವಿಜಯಪುರ ಗ್ರಾಮೀಣ-9480695093, ಬಿಇಒ ವಿಜಯಪುರ ನಗರ-9480695094, ಬಿಇಒ ಚಡಚಣ 9480695095, ಬಿಇಒ ಇಂಡಿ-9480695096, ಬಿಇಒ ಮುದ್ದೇಬಿಹಾಳ-9480695097, ಬಿಇಒ ಸಿಂದಗಿ-948069509 ಸಂಪರ್ಕಿಸಬಹುದಾಗಿದ್ದು ಇದರ ಜೊತೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಬಾಗೆವಾಡಿ ಬಿ.ಇ.ಓ-8722369924, ಬಿಇಒ ವಿಜಯಪುರ ಗ್ರಾಮೀಣ-9448567857, ಬಿಇಒ ವಿಜಯಪುರ ನಗರ-9964685924, ಬಿಇಒ ಚಡಚಣ 997277283, ಬಿಇಒ ಇಂಡಿ-9900600914, ಬಿಇಒ ಮುದ್ದೇಬಿಹಾಳ-9902810917, ಬಿಇಒ ಸಿಂದಗಿ-953512599 ಗೆ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಕೋವಿಡ್-19 ಮುನ್ನೆಚ್ಚರಿಕೆಯಾಗಿ ಈಗಾಗಲೇ ವಿವಿಧ ಜನಪ್ರತಿನಿಧಿಗಳು ಮತ್ತು ಟ್ರಸ್ಟ್‍ಗಳಿಂದ ಪೂರೈಸಿದ 1 ಲಕ್ಷ ಮಾಸ್ಕ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಕ್ರಮ ಕೈಗೊಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕಂಟೇನ್ಮೆಂಟ್ ವಲಯದಿಂದ ಬರುವ ಮಕ್ಕಳಿಗೆ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಿದ್ದು, ಎನ್-95 ಮಾಸ್ಕ್‍ಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಕ್ಕೆ ಬರಲು 147 ಬಸ್‍ಗಳ ವ್ಯವಸ್ಥೆ ಸಹ ಇದ್ದು, 107 ರೂಟ್‍ಗಳಲ್ಲಿ ಬಸ್‍ಗಳು ಸಂಚರಿಸಲಿವೆ. ಅದರಂತೆ ಖಾಸಗಿ ಶಾಲೆಗಳ ಮೂಲಕ ಆಯಾ ವಿದ್ಯಾರ್ಥಿಗಳಿಗೆ ಕರೆದುಕೊಂಡು ಬರಲು ಮತ್ತು ಹೋಗಲು 141 ಖಾಸಗಿ ಬಸ್‍ಗಳ ಸೌಲಭ್ಯ ಕಲ್ಪಿಸಲಾಗಿದೆ. ಕಂಟೇನ್ಮೆಂಟ್ ವಲಯದಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಅಥವಾ ಹಾಜರಾಗದಿದ್ದಲ್ಲಿ ಮುಂದಿನ ಪರೀಕ್ಷೆಯನ್ನು ಪ್ರಥಮ ಪರೀಕ್ಷೆ ಎಂದು ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಅವರು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಕೋವಿಡ್-19 ಕುರಿತ ಮುನ್ನೆಚ್ಚರಿಕೆ ಮಾಹಿತಿ ನೀಡುವ ಪೋಸ್ಟರ್‍ಗಳನ್ನು ಲಗತ್ತಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜರ್ ಮತ್ತು ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಒಂದು ವೇಳೆ ಪರೀಕ್ಷಾ ಕೇಂದ್ರದಲ್ಲಿ ಆಕಸ್ಮಿಕವಾಗಿ ಕೋವಿಡ್-19 ಪ್ರಕರಣಗಳು ಕಂಡುಬಂದಲ್ಲಿ ಪ್ರತಿ ತಾಲೂಕಿನಲ್ಲಿ ಎರಡು ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿದ ಕೇಂದ್ರಗಳೆಂದು ಗೊತ್ತುಪಡಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಕ್ಲಾಸ್-2 ಸ್ಥಳೀಯ ಜಾಗೃತದಳವೆಂದು ನೇಮಿಸಲಾಗಿದೆ. ಅದರಂತೆ ತಲಾ ಒಬ್ಬರನ್ನು ತಾಲೂಕಾ ವೀಕ್ಷಕರನ್ನು ನಿಯೋಜಿಸಿದೆ. ಪ್ರತಿ ಕೇಂದ್ರದಲ್ಲಿ ಹೆಲ್ತ್‍ಕೌಂಟರ್ ತೆರೆಯಲಾಗುತ್ತಿದ್ದು, ವೈದ್ಯರು, ಆರೋಗ್ಯ ಸಹಾಯಕರು ಇರಲಿದ್ದು, ಥರ್ಮಲ್ ಸ್ಕ್ಯಾನಿಂಗ್, ಮಕ್ಕಳಿಗೆ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಸ್ಟ್ಯಾಂಡರ್ಡ್ ಆಪರೇಟಿಂಗ ಪ್ರೋಸಿಜರ್ (ಎಸ್‍ಒಪಿ) ರನ್ವಯ ಪರೀಕ್ಷೆ ನಡೆಸಲಾಗುತ್ತಿದ್ದು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ರಾಷ್ಟ್ರೀಯ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಹಯೋಗದೊಂದಿಗೆ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದರು.


 

ambedkar image

LEAVE A REPLY

Please enter your comment!
Please enter your name here