ವಿಜಯಪುರ: ಕೊರೋನಾ ವೈರಸ್ ಜೊತೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾ ರೋಗಗಳು ಹರಡದಂತೆ ಕ್ರಮ

0
226

ವಿಜಯಪುರ ಮೇ. 26: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣದ ಜೊತೆಗೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾದಂತಹ ರೋಗಗಳ ನಿವಾರಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.

ಡೆಂಗ್ಯೂ, ಮಲೇರಿಯಾ ಜಿಲ್ಲಾಮಟ್ಟದ ಅಂತರ್ ಇಲಾಖೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರಿಗೆ ತಿಳಿಹೇಳುವ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಮನೆಮನೆಗೆ ತಿಳಿಹೇಳುವುದರ ಜೊತೆಗೆ ಆಶಾ ಕಾರ್ಯಕರ್ತೆಯರಿಂದ ಸರ್ವೇ ಕಾರ್ಯ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪ್ರದೇಶದಲ್ಲಿ 20 ಜನ ಆಶಾಕಾರ್ಯಕರ್ತೆಯರನ್ನು ನಿಯೋಜಿಸಿ ಕೋವಿಡ್ ಸರ್ವೇಯಂತೆ ಮನೆಮನೆಗೆ ತೆರಳಿ ಡೇಟಾ ಸಂಗ್ರಹ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ತಿಳಿಹೇಳುವ ಕಾರ್ಯವಾಗಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಕಾರ್ಯ ನಿರತ ನರ್ಸ್‍ಗಳ ಸಹಾಯ ಪಡೆದು ಅವರಿಗೆ ಸೂಕ್ತ ತರಬೇತಿ ನೀಡಿ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸರ್ವೇ ಪ್ರಾರಂಭಿಸಬೇಕು ಎಂದು ಹೇಳಿದರು.

ಡೆಂಗ್ಯೂ ಹಾಗೂ ಮಲೇರಿಯಾ ತಡೆಗಟ್ಟಲು ಹಿಂದಿನ ಮೂರು ವರ್ಷಗಳ ದಾಖಲೆಗಳನ್ನು ಸಂಗ್ರಹಿಸಿ ಯಾವ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಹಾಗೂ ಸ್ಲಂ ಪ್ರದೇಶದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಬ್ಲಡ್ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 300 ಬ್ಲಡ್‍ ಸ್ಯಾಂಪಲ್‍ಗಳಲ್ಲಿ 95 ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾಗಳಿಂದ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ ಎಂದು ಹೇಳಿದರು.

ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಒಳಚರಂಡಿ ಹಾಗೂ ಕೊಳಚೆ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ಮಳೆಗಾಲ ಪ್ರಾರಂವಾಗುವ ಹಿನ್ನೆಲೆಯಲ್ಲಿ ಯಾವದೇ ರೀತಿಯಲ್ಲಿ ಒಳಚರಂಡಿ ಸಮಸ್ಯೆ ಹಾಗೂ ಕೊಳಚೆ ಪ್ರದೇಶಗಳಲ್ಲಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ಕೆ.ಎಸ್‍.ಆರ್.ಟಿ.ಸಿ ಬಸ್ ನಿಲ್ದಾಣದ ಸಂಗ್ರಹ ಸಾಮಗ್ರಿಗಳಲ್ಲಿ ಸೊಳ್ಳೆಗಳು ಉತ್ಪಾದನೆಯಾಗದಂತೆ ಸ್ವಚ್ಛತೆ ಕಾಪಾಡಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ಈಗಿರು ನಾಗರೀಕ ಬೈಲಾಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಅನುಪಯುಕ್ತ ಹಾಗೂ ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡಬೇಕೆಂದು ಹೇಳಿದರು.

ಮಹಾನಗರ ಪಾಲಿಕೆ ಸೊಳ್ಳೆ ನಾಶಕ್ಕೆ ವಾರಕ್ಕೊಮ್ಮೆ ಸೂಕ್ತ ಕೀಟನಾಶಕ ದ್ರಾವಣವನ್ನು ಸಿಂಪಡಿಸಬೇಕು. ಹಾಗೂ ಧೂಮಿಕರಣ ಕೈಗೊಳ್ಳಬೇಕು. ಸೊಳ್ಳೆ ರಹಿತ ಓವರ್‍ಹೆಡ್ ಟ್ಯಾಂಕ್ ಹಾಗೂ ಅಂಡರ್‍ಗ್ರೌಂಡ್ ಟ್ಯಾಂಕ್‍ಗಳನ್ನು ನಿರ್ಮಿಸಬೇಕು. ನೀರು ಸರಬರಾಜು ಮಾಡುವ ಮೊದಲು ಸೂಕ್ತ ಕ್ಲೋರಿನೇಶನ್ ಮಾಡಬೇಕು. ಜೊತೆಗೆ ನೀರು ಸರಬರಾಜು ಮಾಡುವ ಪೈಪುಗಳಲ್ಲಿ ಸೋರಿಕೆಯನ್ನು ತಡೆಗಟ್ಟಬೇಕೆಂದು ಸೂಚಿಸಿದರು.

ಮೀನುಗಾರಿಕೆ ಇಲಾಖೆಯಿಂದ ಲಾರ್ವಾಹಾರಿ ಮೀನುಗಳಾದ ಶಪ್ಪಿ ಮತ್ತು ಗ್ಯಾಂಬ್ಯುಸಿಯಾ ಇವುಗಳನ್ನು ಬೆಳೆಸಿ ಜಿಲ್ಲೆಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳಬೇಕು.ಹಾಗೂ ಆರೋಗ್ಯ ಇಲಾಖೆಗೆ ಅಗತ್ಯಬಿದ್ದಾಗ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸಬೇಕು. ಕರೆ, ಬಾವಿ, ಕೊಳ್ಳಗಳಲ್ಲಿ ಜಿಲ್ಲಾವಾರು ಜಿಐಎಸ್ ನಕ್ಷೆಗಳನ್ನು ತಯಾರಿಸಬೇಕು ಹಾಗೂ ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ತಿಳಿಸಬೇಕೆಂದು ಹೇಳಿದರು.

ನೀರಾವರಿ ಯೋಜನೆಗಳಲ್ಲಿ ಕೆಲಸಕ್ಕಾಗಿ ಬರುವ ಕಾರ್ಮಿಕರು ಹಾಗೂ ಅವರ ಚಲನವಲನಗಳ ಬಗ್ಗೆ ಮುಂಚಿತವಾಗಿ ನೀರಾವರಿ ಇಲಾಖೆ ಆರೋಗ್ಯ ಇಲಾಖೆಗೆ ತಿಳಿಸಬೇಕು. ಹಾಗೂ ಸೂಕ್ತ ತಾಂತ್ರಿಕ ವಿಧಾನಗಳನ್ನು ಅನುಸರಿಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಬೇಕು. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ಸೊಳ್ಳೆ ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಶ್ರೀಮತಿ ಡಾ. ಜೇಬುನ್ನಿಸಾಬೇಗಂ ಬೀಳಗಿ ಮಾತನಾಡಿ ಡೆಂಗ್ಯೂ ಹಾಗೂ ಮಲೇರಿಯಾದಂತಹ ರೋಗ ನಿಯಂತ್ರಣಕ್ಕಾಗಿ ಈಗಾಗಲೇ ನಗರ ಹಾಗೂ ಪಟ್ಟಣ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ತಿಳಿಹೇಳುವ ಕಾರ್ಯಮಾಡಲಾಗಿದ್ದು, ಬ್ಯಾನರ್, ಪಾಂಪ್ಲೇಟ್‍ಗಳನ್ನು ಹಂಚಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಹರಡದಂತೆ ಜಾಗೃತಿ ವಹಿಸುವಂತೆ ತಿಳಿಹೇಳಲಾಗುತ್ತಿದೆ. ಅನೇಕ ಬಡ ಕುಟುಂಬಗಳಿಗೆ ಸೊಳ್ಳೆ ಪರದೆಗಳನ್ನು ನೀಡಲಾಗಿದೆ. ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಸಹ ತಿಳಿಸಲಾಗಿದ್ದು, ಮುಂದಿನ ಹಂತದಲ್ಲಿ ಮನೆಮನೆಗೂ ಭೇಟಿ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಡಬ್ಲ್ಯೂಎಚ್‍ಒ ಅಧಿಕಾರಿ ಮುಕುಂದ ಗಲಗಲಿ, ಡಾ.ಬಿರಾದಾರ, ಡಾ.ಕಟ್ಟಿ, ಡಿಎಚ್‍ಒ ಮಹೇಂದ್ರ ಕಾಪ್ಸೆ, ಟಿಎಚ್‍ಒ ಕವಿತಾ, ಎನ್.ಆರ್ ಬಾಗವಾನ ಸೇರಿದಂತೆ ಇತರರಿದ್ದರು.


 

ambedkar image

LEAVE A REPLY

Please enter your comment!
Please enter your name here