ವಿಜಯಪುರ ಮಾ 31: ಕೋವಿಡ್-19 ಸಾಂಕ್ರಾಮಿಕ ವೈರಾಣು ಹರಡದಿರುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾದ್ಯಂತ ಲಾಕ್ಡೌನ್ ಎಪ್ರೀಲ್ 14 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ದೈನಂದಿನ ಜೀವನಕ್ಕಾಗಿ ಬೇಕಾಗಿರುವ ಅಗತ್ಯ ವಸ್ತುಗಳನ್ನು ಪಡೆಯಲು ಚಿಲ್ಲರೆ ಕಿರಾಣಿ ಅಂಗಡಿಗಳನ್ನು ಹಾಗೂ ಕಿರಾಣಿ ಸಗಟು ಅಂಗಡಿಗಳನ್ನು ( ಎಲ್.ಬಿ.ಎಸ್ ಮಾರುಕಟ್ಟೆಯನ್ನು ಹೊರತುಪಡಿಸಿ) ಯತಾಸ್ಥಿಯಲ್ಲಿ ಕಾರ್ಯನಿರ್ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲೆಯಲ್ಲಿ ಲಾಕ್ಡೌನ್ ಮಾಡಿರುವುದನ್ನು ದುರುಪಯೋಗ ಪಡೆಸಿಕೊಂಡಿರುವ ಕೆಲವೊಂದು ಕಿರಾಣಿ ಚಿಲ್ಲರೆ ಹಾಗೂ ಸಗಟು ವರ್ಕಕರು ಹೆಚ್ಚಿನ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದು, ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅಂಗಡಿಯಲ್ಲಿ ದಾಸ್ತಾನು ಇದ್ದರು ಸಹ ಇಲ್ಲವೆಂದು ಕೃತಕ ಅಭಾವ ಸೃಷ್ಠಿಸುವುದು ಕರ್ನಾಟಕ ಅಗತ್ಯ ವಸ್ತುಗಳ ಆದೇಶ 1981 ರ ನಿಯಮಾವಳಿ ವಿರುದ್ದವಾಗಿದ್ದು, ಹೀಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.