ವಿಜಯಪುರದಲ್ಲಿ “ಲಾಲ್‍ಬಾಗ್ ಮಾದರಿಯಲ್ಲಿ ಸಸ್ಯ ಸಂಗಮ ಟ್ರೀ ಪಾರ್ಕ”

0
184

ವಿಜಯಪುರ  ಫೆ 09: ಭೂತನಾಳ ಕೆರೆ ಕರಾಡ ದೊಡ್ಡಿ ಆವರಣದಲ್ಲಿ ಸುಸಜ್ಜಿತ “ಸಸ್ಯ ಸಂಗಮ” ಟ್ರೀ ಪಾರ್ಕ್ ಅಭಿವೃದ್ಧಿ ಪಡಿಸುವ ಕುರಿತಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಸ್ಯ ಸಂಗಮ ಟ್ರೀ ಪಾರ್ಕ್ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್‍ಬಾಗ್ ಮಾದರಿಯಲ್ಲಿ ಈ ಟ್ರಿ ಪಾರ್ಕ್ ರೂಪಿಸಲು ಉದ್ದೇಶಿಸಲಾಗಿದ್ದು, ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲಕ್ಕಾಗಿ ವಿವಿಧ ತಳಿಯ ಸಸಿಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಜಿಲ್ಲೆಯ ಸಾರ್ವಜನಿಕರಿಗೆ ವಿಶ್ರಾಂತಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಈಗಾಗಲೇ ಭೂತನಾಳ ಕೆರೆ ವ್ಯಾಪ್ತಿಯಲ್ಲಿ 540 ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಈ ಸಸ್ಯೋದಾನದಲ್ಲಿ ನೈಸರ್ಗಿಕ ಅರಣ್ಯ ಅಭಿವೃದ್ಧಿಯ ಜೊತೆಗೆ ವಿವಿಧ ಮಾದರಿಯ ಮತ್ತು ತಳಿಗಳ ಸಸಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತಂತೆ ಯೋಜನೆ ರೂಪಿಸಬೇಕು. ಇಲ್ಲಿಯ ವಾತಾವರಣಕ್ಕೆ ಪೂರಕವಾಗುವ ಸಸಿಗಳ ಅಭಿವೃದ್ಧಿಗೆ ಯೋಜನೆ ಹಾಗೂ ಖರ್ಚು ವೆಚ್ಚ ವರದಿ ಸಹ ಸಿದ್ಧಪಡಿಸಲಾಗಿದೆ. ಅದರಂತೆ ಔಷಧಿಯ, ಆಯುರ್ವೇದಿಕ್ ಸಸಿಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗ ಅಧಿಕಾರಿಗಳಿಗೆ ಸೂಚಿಸಿದ ಅವರು, ತೋಟಗಾರಿಕೆ ಆಧಾರಿತ ಚಟುವಟಿಕೆಗಳಿಗೂ ಇಲ್ಲಿ ಅವಕಾಶ ನೀಡುವ ಹಿನ್ನೆಲೆಯಲ್ಲಿ ಗ್ಲಾಸ್ ಹೌಸ್ (ಗಾಜಿನ ಮನೆ) ನಿರ್ಮಾಣ ಸೇರಿದಂತೆ ವಿಶೇಷ ರೀತಿಯ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತಾವನೆ ರೂಪಿಸುವಂತೆ ಅವರು ಸೂಚಿಸಿದರು.
ಅದರಂತೆ ಇಲ್ಲಿಯ ಮಕ್ಕಳ ಮನರಂಜನೆಯ ಅನುಕೂಲಕ್ಕಾಗಿ ಬಟರ್ ಫ್ಲೈ ಪಾರ್ಕ್, ಕ್ಯಾಟ್ತಸ್ ಹೌಸ್ ನಿರ್ಮಾಣದ ಬಗ್ಗೆಯೂ ಯೋಜನೆಯು ರೂಪಿಸಬೇಕು. ಅರಣ್ಯ ಇಲಾಖೆ ಮೂಲಕ ಸಸಿಗಳ ಜೊತೆಗೆ ಸಂಪರ್ಕ ರಸ್ತೆಗಳು, ಮಹಾ ನಗರ ಪಾಲಿಕೆಯಿಂದ ಸೋಲಾರ್ ವಿದ್ಯುತ್ ದೀಪಗಳ ಸೌಲಭ್ಯ, ಸಂಸ್ಕರಿಸಿದ ರಸ ಗೊಬ್ಬರದ ಸೌಲಭ್ಯ ಸೇರಿದಂತೆ ಕುಡಿಯುವ ನೀರು, ಶೌಚಾಲಯದ ಸೌಲಭ್ಯ ಕಲ್ಪಿಸುವ ಕುರಿತು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮಕ್ಕಳಿಗೆ ಈ ಸಸ್ಯೋದ್ಯಾನ ಆಕರ್ಷಕ ಕೇಂದ್ರವಾಗಿ ಅಭಿವೃದ್ಧಿಗೊಳ್ಳಬೇಕು. ಬೆಂಗಳೂರಿನ ಮತ್ತು ಮೈಸೂರು ಭಾಗದ ಬಂಡೀಪುರ ಅಭಯಾರಣ್ಯ ಮೂಲಕ ಅನೇಕ ಪ್ರಾಣಿ, ಪಕ್ಷಿಗಳ ವೀಕ್ಷೆಣೆಗೆ ಸದಾವಕಾಶ ಪಡೆದಿರುವ ಮಾದರಿಯಲ್ಲಿಯೇ ಜಿಲ್ಲೆಯ ಮಕ್ಕಳು ಕೂಡ ಸಸ್ಯ, ಪ್ರಾಣಿ ಪಕ್ಷಿ ಸಂಕುಲವನ್ನು ಕಣ್ತುಂಬಿಕೊಳ್ಳಲು ಪ್ರಾಣಿ ಸಂಗ್ರಾಲಯ ಮತ್ತು ಪಕ್ಷಿಧಾಮ ಅಭಿವೃದ್ಧಿಗೂ ವಿಶೇಷ ಗಮನ ನೀಡುವಂತೆ ತಿಳಿಸಿದ ಅವರು ವನ್ಯಜೀವಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಗೂ ಪ್ರಾಣಿ ಸಂಗ್ರಾಲಯ ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯದರ್ಶಿಗಳೊಂದಿಗೂ ಜಿಲ್ಲಾಧಿಕಾರಿಗಳು ಸಮಾಲೋಚನೆ ನಡೆಸುವುದಾಗಿ ಸಭೆಗೆ ತಿಳಿಸಿದರು.
ಈ ಸಸ್ಯ ಸಂಗಮ ಉದ್ಯಾನವನದಲ್ಲಿ ಕುಡಿಯುವ ನೀರು, 45 ಎತ್ತರದ ಮೇಲಜಲಸಂಗ್ರಹಾಗಾರವನ್ನು ವೀಕ್ಷಣಾ ಗೋಪುರವಾಗಿ ಅಭಿವೃದ್ಧಿ ಪಡಿಸುವುದಾಗಿ ಚರ್ಚಿಸಿದ ಅವರು, ಮೀನು ಅಕ್ವೋರಿಯಂ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿದ ಅವರು ಒಟ್ಟು 2.77 ಕೋಟಿ ರೂ. ವೆಚ್ಚದಲ್ಲಿ ಈ ಟ್ರೀ ಪಾರ್ಕ್ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಭೂತನಾಳ ಕೆರೆ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ, ಮಕ್ಕಳ ಕ್ರೀಡಾ ಚಟುವಟಿಕೆ, ವಾಟರ್ ಪೊಂಡ್ ಸಂಬಂಧಪಟ್ಟಂತೆ ಟೆಂಡರನ್ನು ಸಹ ಆಹ್ವಾನಿಸಲಾಗಿದೆ ಎಂದು ಕೆ.ಬಿ ಜೆ ಎನ್ ಎಲ್ ಅರಣ್ಯ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಶ್ರೀ ಸಂತೋಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀ ಶಿವಕುಮಾರ, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಶ್ರೀಮತಿ ಸರೀನಾ, ಕೆ.ಬಿ ಜೆ ಎನ್ ಎಲ್‍ನ ಆರ್.ಏಫ್ ಒ ಮಹೇಶ ಪಾಟೀಲ, ಡಿ.ಸಿ.ಎಫ್ ಎನ್.ಕೆ ಬಾಗಾಯತ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here